ದಾವಣಗೆರೆ: ಅಗ್ರ ಶ್ರೇಯಾಂಕದ ಕಿಶನ್ ಗಂಗೊಳ್ಳಿ (ಶಿವಮೊಗ್ಗ), ವಿನಯ್ ಕುರ್ತಕೋಟಿ (ಧಾರವಾಡ) ಮತ್ತು ಸ್ಥಳೀಯ ಆಟಗಾರ ಲಿಖಿತ್ ಚಿಲ್ಕುರಿ ಅವರು ಶನಿವಾರ ನಗರದಲ್ಲಿ ಆರಂಭವಾದ ರಾಜ್ಯ ಮಟ್ಟದ ಓಪನ್ ರ್ಯಾಪಿಡ್ ಚೆಸ್ ಟೂರ್ನಿಯಲ್ಲಿ ಮುನ್ನಡೆ ಹಂಚಿಕೊಂಡ 9 ಆಟಗಾರರಲ್ಲಿ ಒಳಗೊಂಡಿದ್ದಾರೆ.
ವಿಝ್ ಕಿಡ್ಸ್ ಚೆಸ್ ಅಕಾಡೆಮಿ ಆಶ್ರಯದಲ್ಲಿ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಬಿಐಇಟಿ) ಆವರಣದಲ್ಲಿನಡೆಯುತ್ತಿರುವ ಈ ಎರಡು ದಿನಗಳ ಟೂರ್ನಿಯಲ್ಲಿ 170 ಮಂದಿ ಪಾಲ್ಗೊಂಡಿದ್ದಾರೆ.
ನಾಲ್ಕನೇ ಸುತ್ತಿನ ನಂತರ 9 ಮಂದಿ ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಮುನ್ನಡೆಯಲ್ಲಿರುವ ಉಳಿದ ಆರು ಮಂದಿ– ಚಿರಂತ್ ಎಂ.ಡಿ. (ಶಿವಮೊಗ್ಗ). ಕೇದಾರ್ ಉಮೇಶ್ ವಝೆ, ಅರ್ಜುನ್ ಪ್ರಭು (ಮೈಸೂರು), ಟಿ.ವಿ.ಅನಂತರಾಮ್ (ಬೆಂಗಳೂರು), ರಕ್ಷಿತ್ ಆರ್.ಉಮೇಶ್ ಮತ್ತು ಅಜಯ್ ಎಸ್.ಎಂ. (ಶಿವಮೊಗ್ಗ).
ನಾಲ್ಕನೇ ಸುತ್ತಿನಲ್ಲಿ ಕಿಶನ್ ಗಂಗೊಳ್ಳಿ, ಭದ್ರಾವತಿಯ ನಾಗಕಿರಣ್ ಎಸ್. (3) ವಿರುದ್ಧ ಜಯಗಳಿಸಿದರೆ, ವಿನಯ್, ದಾವಣಗೆರೆಯ ಪ್ರತೀಕ್ ಎಸ್.ಹೆಗ್ಡೆ (3) ವಿರುದ್ಧ ಗೆಲುವು ಪಡೆದರು.
ಚಿರಂತ್ ಎಂ.ಡಿ. ಶಿರಸಿಯ ರಾಮಚಂದ್ರ ಭಟ್ (3) ಎದುರು; ಮೈಸೂರಿನ ಕೇದಾರ ಉಮೇಶ್ (4), ಬೆಂಗಳೂರಿನ ಕಿರಣ್ ವಸಿಷ್ಠ (3) ವಿರುದ್ಧ ಜಯಗಳಿಸಿದರು.
ಮೂರನೇ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಎ.ಆಗಸ್ಟಿನ್, ಭದ್ರಾವತಿಯ ಮಂಜುನಾಥ ಕೆ. (3) ಎದುರು ಸೋಲನುಭವಿಸಿದ್ದು ‘ದಿನದ ಅನಿರೀಕ್ಷಿತ’ ಎನಿಸಿತು.
ಬಿಐಇಟಿ ಜವಳಿ ವಿಭಾಗದ ಮುಖ್ಯಸ್ಥ ಜಿ.ಮಹೇಶ್ ಪಾಟೀಲ ಉದ್ಘಾಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.