ADVERTISEMENT

ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿ ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ನವದೆಹಲಿ (ಪಿಟಿಐ): ಉದ್ದೀಪನ ಮದ್ದು ಸೇವನೆ ಮಾಡಿ ಎರಡು ವರ್ಷ ಅಮಾನತು ಶಿಕ್ಷೆಗೆ ಗುರಿಯಾಗಿದ್ದ ಅಥ್ಲೀಟ್ ಅಶ್ವಿನಿ ಅಕ್ಕುಂಜಿ ತಮ್ಮ ಶಿಕ್ಷೆಯ ಅವಧಿ ಪೂರ್ಣಗೊಳಿಸಿದ್ದು, ಮತ್ತೆ ಓಡುವ ಹುಮ್ಮಸ್ಸಿನಲ್ಲಿದ್ದಾರೆ.

ಮಾಸ್ಕೊದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದಿರುವ ಭಾರತ 4್ಡ400 ರಿಲೇ ತಂಡದಲ್ಲಿ ಸ್ಥಾನ ಪಡೆಯಲು ಕರ್ನಾಟಕದ ಅಥ್ಲೀಟ್ ತೀವ್ರ ಪ್ರಯತ್ನ ನಡೆಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವ ತಂಡವನ್ನು ಆಯ್ಕೆ ಮಾಡಲು ಜುಲೈ 19ರಂದು ಟ್ರಯಲ್ಸ್ ನಡೆಯಲಿದೆ. ಈ ಆಯ್ಕೆ ಪಟಿಯಾಲದಲ್ಲಿರುವ ಎನ್‌ಐಎಸ್‌ನಲ್ಲಿ ನಡೆಯಲಿದೆ.

ಭಾರತ ಅಥ್ಲೆಟಿಕ್ ಫೆಡರೇಷನ್ ಆಯ್ಕೆ ಸಮಿತಿ ಟ್ರಯಲ್ಸ್‌ನ ಮರುದಿನ ಭಾರತ ತಂಡವನ್ನು ಅಂತಿಮಗೊಳಿಸಲಿದೆ. ಅಶ್ವಿನಿ ಅಕ್ಕುಂಜಿ 2010ರ ಏಷ್ಯಾ ಕ್ರೀಡಾಕೂಟದ 400ಮೀ. ಹರ್ಡಲ್ಸ್ ಮತ್ತು 4್ಡ400ಮೀ. ರಿಲೇಯಲ್ಲಿ ಚಿನ್ನ ಜಯಿಸಿದ್ದರು.

`ಭಾರತ ತಂಡದ ಆಯ್ಕೆಗೆ ನಾನು ಅರ್ಹಳಾಗಿದ್ದೇನೆ. ನನ್ನ ತರಬೇತಿಯನ್ನು ಮುಂದುವರಿಸುತ್ತೇನೆ. ಆದರೆ, ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎನ್ನುವುದನ್ನು ಇನ್ನು ನಿರ್ಧರಿಸಿಲ್ಲ' ಎಂದು ಅಶ್ವಿನಿ ತಿಳಿಸಿದರು.

`ಪುಣೆಯಲ್ಲಿ ನಡೆದ ಏಷ್ಯಾ  ಅಥ್ಲೆಟಿಕ್ಸ್‌ನಲ್ಲಿ ತಂಡದ್ದಲ್ಲಿದ್ದ ಎಂ.ಆರ್. ಪೂವಮ್ಮ ಹಾಗೂ ಅನು ಮರಿಯಮ್ ಜೋಸ್ ಅವರಿಗೆ ಸ್ಥಾನ ಲಭಿಸುವುದು ಖಚಿತ. ಆದರೆ, ಇನ್ನುಳಿದ ಇಬ್ಬರು ಅಥ್ಲೀಟ್‌ಗಳನ್ನು ಆಯ್ಕೆ ಮಾಡಬೇಕಿದೆ' ಎಂದು ಎಎಫ್‌ಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.