ದುಬೈ (ಐಎಎನ್ಎಸ್): ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಯುವರಾಜ್ ಸಿಂಗ್ ಅವರು ಮುಂಬರುವ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ನಲ್ಲಿ ಆಡುವ ಮೂಲಕ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹಿಂದಿರುಗಲು ಬಯಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ನ ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಆಶಯವನ್ನೂ `ಯುವಿ~ ಹೊಂದಿದ್ದಾರೆ.
`ಐಸಿಸಿ ಕ್ರಿಕೆಟ್ 350 ಡಿಗ್ರಿ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ಯಾವಾಗ ಆಡಲು ಸಜ್ಜಾಗುತ್ತೇನೆ ಎನ್ನುವುದು ಸ್ಪಷ್ಟವಿಲ್ಲ. ನಾನು ಸಮಯದ ಗಡುವು ಕೂಡ ಹಾಕಿಕೊಂಡಿಲ್ಲ. ಬೇಗ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಬಯಕೆ ಹೊಂದಿದ್ದರೂ, ದೈಹಿಕವಾಗಿ ಆಡುವ ಮಟ್ಟದ ಸಾಮರ್ಥ್ಯವನ್ನು ಯಾವಾಗ ಪಡೆಯುತ್ತೇನೆಂದು ನಿರ್ಧರಿಸುವುದು ಕಷ್ಟ~ ಎಂದರು.
`ಆತುರ ಮಾಡುವುದಿಲ್ಲ. ಶೇ 75 ರಷ್ಟು ಗುಣವಾಗಿದ್ದೇನೆಂದು ಆಡುವುದು ಸರಿಯಲ್ಲ. ಅಂಥ ಯೋಚನೆಯೂ ನನಗಿಲ್ಲ. ನೂರಕ್ಕೆ ನೂರರಷ್ಟು ಸಜ್ಜಾಗಲು ಆರು ತಿಂಗಳಾದರೂ ಬೇಕಾಗಬಹುದು; ಇಲ್ಲವೆ ಎರಡು ತಿಂಗಳು ಸಾಕಾಗಬಹುದು. ಅದನ್ನು ನಾನು ನಿರ್ಧರಿಸಲು ಆಗದು. ಒಂದಂತೂ ಸ್ಪಷ್ಟ; ನೂರಕ್ಕೆ ನೂರರಷ್ಟು ದೈಹಿಕವಾಗಿ ಸಿದ್ಧನಾಗಿದ್ದರೆ ಮಾತ್ರ ಆಡುತ್ತೇನೆ~ ಎಂದು ವಿವರಿಸಿದರು.
`ನಾನಿರುವ ಪರಿಸ್ಥಿತಿಯನ್ನು ಬೇರೆಯವರು ಕಲ್ಪನೆ ಮಾಡಿಕೊಳ್ಳಲು ಕೂಡ ಆಗದು. ಸಾಕಷ್ಟು ಆಘಾತಗಳನ್ನು ಅನುಭವಿಸಿದೆ ಈ ದೇಹ. ಆದ್ದರಿಂದ ಮತ್ತೆ ದೇಶದ ತಂಡಕ್ಕಾಗಿ ಆಡುವುದು ದೊಡ್ಡ ಸವಾಲು ಎನ್ನುವುದನ್ನು ನಾನೂ ಬಲ್ಲೆ~ ಎಂದರು 30 ವರ್ಷ ವಯಸ್ಸಿನ ಯುವರಾಜ್.
ಶ್ರೀಲಂಕಾದಲ್ಲಿ ಭಾರತ ತಂಡವು ಟ್ವೆಂಟಿ-20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಲು ತಾವೂ ನೆರವಾಗಬೇಕೆಂದು ಬಯಸಿರುವ ಈ ಆಲ್ರೌಂಡರ್ `ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ಆಟಗಾರರಿಗೆ ನಮ್ಮ ದೇಶದಲ್ಲಿ ಕೊರತೆ ಇಲ್ಲ. ಆದರೆ ನಾನೂ ತಂಡದಲ್ಲಿ ಇರಲು ಇಷ್ಟಪಡುತ್ತೇನೆ.
ಆ ವಿಷಯ ಏನೇ ಇರಲಿ ಬ್ಯಾಟಿಂಗ್ ವಿಭಾಗ ಭಾರತಕ್ಕೆ ಸಮಸ್ಯೆಯಲ್ಲ. ಆದರೆ ಬೌಲಿಂಗ್ನಲ್ಲಿ ಇನ್ನಷ್ಟು ಪ್ರಭಾವಿಯಾದರೆ ನಮ್ಮನ್ನು ಮೀರಿ ನಿಲ್ಲುವ ಇನ್ನೊಂದು ತಂಡವೇ ಇಲ್ಲ~ ಎಂದು ವಿಶ್ವಾಸದಿಂದ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.