ಕಾರವಾರ: `ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್' ಪ್ರಾಯೋಜಿತ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ಇನ್ನೂರಕ್ಕೂ ಹೆಚ್ಚು ಓಟಗಾರರು ಶನಿವಾರ ಇಲ್ಲಿಗೆ ಬಂದಿಳಿದಿದ್ದಾರೆ.
ಭಾನುವಾರ ಮುಂಜಾನೆ ನಡೆಯಲಿರುವ ಈ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಓಟಗಾರರು ಇಲ್ಲಿಗೆ ಬಂದಿದ್ದು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಅಥ್ಲೆಟಿಕ್ ಕ್ಲಬ್ನ ಸಂಘಟನಾ ಕಾರ್ಯದರ್ಶಿ ಅನಂತರಾಜು ತಿಳಿಸಿದ್ದಾರೆ.
ಇಲ್ಲಿ ಕಳೆದ ಮೂರು ದಿನಗಳಿಂದ ಜಿಟಿಜಿಟಿ ಮಳೆ ಬೀಳುತ್ತಿರುವುದರಿಂದ ಕೆಲವು ಅನುಭವಿ ಓಟಗಾರರು ಬಂದಿಲ್ಲ. ಆದರೆ ರಾಜ್ಯದ ಪ್ರಮುಖ ದೂರ ಅಂತರದ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ ಮೈಸೂರಿನಿಂದ ಇಲ್ಲಿಗೆ ಬಂದಿದ್ದು ಮಹಿಳಾ ವಿಭಾಗದಲ್ಲಿ ಸವಾಲು ಒಡ್ಡಲಿದ್ದಾರೆ ಎಂದೂ ಅವರು ತಿಳಿಸಿದರು.
ಬಾಲಕರ ವಿಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಇವತ್ತು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಈ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡು ಬರಲಿದೆ.
ನಗರದ ಮಾಲಾದೇವಿ ಮೈದಾನದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಅವರು ಚಾಲನೆ ನೀಡಲಿದ್ದಾರೆ. ಓಟಗಾರರು ಈ ಸ್ಥಳದಿಂದ ಕಾಜೂಬಾಗ್ ವೃತ್ತ, ದೇವಳಿವಾಡ ರಸ್ತೆ, ಸೋನಾರವಾಡ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕೋಡಿಬಾಗ್ ರಸ್ತೆಗಳಲ್ಲಿ ಸಾಗಿ ಮಾಲಾದೇವಿ ಮೈದಾನ ತಲುಪಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.