ADVERTISEMENT

ಪದಕ ಗೆಲ್ಲಲು ನನಗೂ ಅವಕಾಶವಿದೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ಹೈದರಾಬಾದ್ (ಪಿಟಿಐ): `ಈ ವರ್ಷ ನಾನು ಉತ್ತಮ ಪ್ರದರ್ಶನ ತೋರುತ್ತಿದ್ದೇನೆ. ಪ್ರಮುಖ ಆಟಗಾರರನ್ನು ಸೋಲಿಸಿದ್ದೇನೆ. ಟೂರ್ನಿಯಿಂದ ಟೂರ್ನಿಗೆ ಸುಧಾರಣೆ ಕಾಣುತ್ತಿದ್ದೇನೆ. ಹಾಗಾಗಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ನನಗೂ ಅವಕಾಶವಿದೆ~ ಎಂದು ಭಾರತದ ಬ್ಯಾಡ್ಮಿಂಟನ್ ಆಟಗಾರ ಪಿ.ಕಶ್ಯಪ್ ನುಡಿದಿದ್ದಾರೆ.

ಕಶ್ಯಪ್ ಈಗ 22ನೇ ರ್‍ಯಾಂಕ್ ಹೊಂದಿದ್ದಾರೆ. ಇತ್ತೀಚಿನ ಟೂರ್ನಿಗಳಲ್ಲಿ ಪ್ರಮುಖ ಆಟಗಾರರಿಗೆ ಆಘಾತ ನೀಡಿ ಅಚ್ಚರಿ ಫಲಿತಾಂಶಕ್ಕೆ ಕಾರಣರಾಗಿದ್ದಾರೆ. ಜೂನ್‌ನಲ್ಲಿ ಜಕಾರ್ತದಲ್ಲಿ ನಡೆದ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವದ ಮೂರನೇ ರ್‍ಯಾಂಕ್ ನ ಆಟಗಾರ ಚೀನಾದ ಚೆನ್ ಲಂಗ್‌ಗೆ ಆಘಾತ ನೀಡಿದ್ದು ಅದಕ್ಕೊಂದು ಸಾಕ್ಷಿ. ಈ ಟೂರ್ನಿಯಲ್ಲಿ ಅವರು ಸೆಮಿಫೈನಲ್ ಪ್ರವೇಶಿಸಿದ್ದರು. ಇದು ಕಶ್ಯಪ್ ಮೇಲೆ ಎಲ್ಲರೂ ವಿಶ್ವಾಸವಿಡಲು ಪ್ರಮುಖ ಕಾರಣ.

`10 ರ್‍ಯಾಂಕ್ ನೊಳಗೆ ಸ್ಥಾನ ಪಡೆಯುವುದು ನನ್ನ ಮುಖ್ಯ ಗುರಿ. ಆದರೆ ಅದಕ್ಕಾಗಿ ನಾನು ಸಮಯ ನಿಗದಿಪಡಿಸಿಲ್ಲ. ಈ ವರ್ಷದ ಅಂತ್ಯದೊಳಗೆ ಆ ಸಾಧನೆ ಮಾಡುವ ವಿಶ್ವಾಸದಲ್ಲಿದ್ದೇನೆ. ಈ ವರ್ಷ ಎರಡು ಸೂಪರ್ ಸರಣಿಗಳಲ್ಲಿ ನಾನು ಸೆಮಿಫೈನಲ್ ತಲುಪಿದ್ದೆ. ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ನನ್ನ   ರ‌್ಯಾಂಕ್‌ನಲ್ಲಿ ಸುಧಾರಣೆ   ಆಗಲಿದೆ~ ಎಂದೂ ಅವರು ವಿವರಿಸಿದರು.

`ಈ ಸಾಧನೆಗೆ ಕೋಚ್ ಪುಲ್ಲೇಲಾ ಗೋಪಿಚಂದ್ ಕಾರಣ. ಅವರನ್ನು ಕೋಚ್ ಆಗಿ ಪಡೆದಿರುವ ನಾನೇ ಧನ್ಯ. ನನ್ನ ಆಟದ ಸುಧಾರಣೆಗೆ ಅವರು ತುಂಬಾ ಪ್ರಯತ್ನ ಹಾಕುತ್ತಿದ್ದಾರೆ. ನನ್ನ ಶಕ್ತಿ ಎಂದರೆ ಆಕ್ರಮಣಕಾರಿ ಆಟ ಆಡುವುದು. ಇಂತಹ ಸಂದರ್ಭಗಳಲ್ಲಿ ತಪ್ಪುಗಳಾಗುತ್ತವೆ. ಆ ತಪ್ಪುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ಜೊತೆಗೆ ಫಿಟ್‌ನೆಸ್ ಕಡೆಗೂ ಗಮನ ಹರಿಸುತ್ತಿದ್ದೇನೆ~ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.