ನವದೆಹಲಿ: ಸುಬ್ರತಾ ಪಾಲ್ ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಭಾರತ ಫುಟ್ಬಾಲ್ ತಂಡದ ವೈದ್ಯ ಶ್ರೀಜಿತ್ ಕಮಲ್ ಅವರನ್ನು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ವಜಾ ಮಾಡಿದೆ.
ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಪುನೀತ್ ಕೆಂಚಪ್ಪ ಗಿರಿಯಪ್ಪ ಅವರನ್ನು ಕಮಲ್ ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ. 23 ವರ್ಷದೊಳಗಿನವರ ಎಎಫ್ಸಿ ಕಪ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳಿಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡವನ್ನು ಕೆಂಚಪ್ಪ ಶೀಘ್ರ ಸೇರಲಿದ್ದಾರೆ.
ಹಿರಿಯ ಆಟಗಾರರಾದ ಸುಬ್ರತಾ ಪಾಲ್ ಅವರಿಗೆ ಔಷಧಿ ಬರೆದುಕೊಡುವಾಗ ಶ್ರೀಜಿತ್ ಕಮಲ್ ತಪ್ಪು ಮಾಡಿದ್ದರು. ಇದರಿಂದ ಸುಬ್ರತಾ ಅವರ ವೃತ್ತಿ ಜೀವನಕ್ಕೆ ಧಕ್ಕೆಯಾಗಿತ್ತು. ಹೀಗಾಗಿ ಅವರ ವಿರುದ್ಧ ಕ್ರಮಕ್ಕೆ ನಾಡಾ ಸೂಚಿಸಿತ್ತು.
ಈ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದ ಪುನೀತ್ ಅವರು ಪ್ರೊ ಕಬಡ್ಡಿ ಲೀಗ್ನಲ್ಲೂ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.