ಬೆಂಗಳೂರು: ಉಮಾಶಂಕರ್ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಆರ್ಬಿಐ ತಂಡ ಪುನರಾರಂಭವಾದ ಸೂಪರ್ ಡಿವಿಷನ್ ಫುಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಶುಕ್ರವಾರದ ಪಂದ್ಯದಲ್ಲಿ 4-3ಗೋಲುಗಳಿಂದ ಎಲ್ಆರ್ಡಿಇ ಎದುರು ಗೆಲುವು ಸಾಧಿಸಿತು.
ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಆಶ್ರಯದಲ್ಲಿ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು. ವಿಜಯಿ ತಂಡದ ಅಲ್ವಿನ್ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ಉಮಾಶಂಕರ್ 14, 30 ಹಾಗೂ 47ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಎಲ್ಆರ್ಡಿಇ ತಂಡದ ಚಂದ್ರಕುಮಾರ್ ಸಹ ಇದಕ್ಕೆ ತಕ್ಕ ಪೈಪೋಟಿ ಒಡ್ಡಿದರು. ಅವರೂ ಹ್ಯಾಟ್ರಿಕ್ ಗೋಲು ಗಳಿಸಿದರು. ಆ ಗೋಲುಗಳು 44, 50 ಮತ್ತು 70ನೇ ನಿಮಿಷದಲ್ಲಿ ಬಂದವು.
ದಿನದ ಇನ್ನೊಂದು ಪಂದ್ಯದಲ್ಲಿ ಬಿಇಎಂಎಲ್ (ಕೆಜಿಎಫ್ ಅಕಾಡೆಮಿ) 2-0ಗೋಲುಗಳಿಂದ ಸಿಐಎಲ್ ಎದುರು ಜಯ ಪಡೆಯಿತು. ವಿಜಯಿ ತಂಡದ ರಾಜೇಶ್ ಹಾಗೂ ಕಲಂದರ್ ಕ್ರಮವಾಗಿ 11 ಹಾಗೂ 82ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು.
ಪಂದ್ಯವನ್ನಾಡುತ್ತ ಕ್ರೀಡಾಂಗಣದಲ್ಲಿ ಆಟಗಾರ ಮೃತಪಟ್ಟ ಘಟನೆ ನಡೆದ ಹಿನ್ನೆಲೆಯಲ್ಲಿ ಈ ಟೂರ್ನಿಯನ್ನು ಮುಂದೂಡಲಾಗಿತ್ತು.
ಶನಿವಾರದ ಪಂದ್ಯಗಳು: ಧರ್ಮರಾಜ್ ಯೂನಿಯನ್-ಐಎಸ್ಆರ್ಒ ಮತ್ತು ಎಚ್ಎಎಲ್-ಎಡಿಇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.