
ಬೆಂಗಳೂರು: ಉತ್ತಮ ಪ್ರದರ್ಶನ ಮುಂದುವರಿಸಿದ ಕರ್ನಾಟಕದ ಅನೂಪ್ ಶ್ರೀಧರ್ ಅವರು ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಸಹಯೋಗದೊಂದಿಗೆ ಇಲ್ಲಿ ನಡೆಯುತ್ತಿರುವ ಕೆನರಾ ಬ್ಯಾಂಕ್ ಅಖಿಲ ಭಾರತ ಸೀನಿಯರ್ ರ್್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್ನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅನೂಪ್ 21–15, 18–21, 21–13ರಲ್ಲಿ ಆಂಧ್ರಪ್ರದೇಶದ ಎ.ಎಸ್.ಎಸ್.ವರ್ಮ ಅವರನ್ನು ಸೋಲಿಸಿದರು. ಇದಕ್ಕೂ ಮೊದಲು ಅವರು ಕ್ವಾರ್ಟರ್ ಫೈನಲ್ನಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ಅನೂಪ್ 21–16, 21–11ರಲ್ಲಿ ಚೇತನ್ ಆನಂದ್ ಅವರನ್ನು ಮಣಿಸಿದ್ದರು.
ಆದರೆ ಕರ್ನಾಟಕದ ಮತ್ತೊಬ್ಬ ಆಟಗಾರ ಅರವಿಂದ್ ಭಟ್ ಎಂಟರ ಘಟ್ಟದ ಪಂದ್ಯದಲ್ಲಿಯೇ ನಿರಾಸೆ ಅನುಭವಿಸಿದರು. ಅವರು 21–23, 18–21ರಲ್ಲಿ ಆಂಧ್ರಪ್ರದೇಶದ ಸಿರಿಲ್ ವರ್ಮ ಎದುರು ಪರಾಭವಗೊಂಡರು. ಮತ್ತೊಂದು ಸೆಮಿಫೈನಲ್ ಹೋರಾ ಟದಲ್ಲಿ ಸೌರಭ್ ವರ್ಮ 21–16, 21–15ರಲ್ಲಿ ಸಮೀರ್ ವರ್ಮ ಎದು ರು ಗೆದ್ದು ಅಂತಿಮ ಘಟ್ಟ ತಲುಪಿದರು. ಅವರು ಶನಿವಾರ ನಡೆಯಲಿರುವ ಫೈನಲ್ನಲ್ಲಿ ಅನೂಪ್ ಎದುರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.
ಮಹಿಳೆಯರ ವಿಭಾಗದ ಸಿಂಗಲ್ಸ್ನಲ್ಲಿ ಏರ್ ಇಂಡಿಯಾದ ತನ್ವಿ ಲಾಡ್ ಹಾಗೂ ಆಂಧ್ರಪ್ರದೇಶದ ರಿತುಪರ್ಣ ದಾಸ್ ಫೈನಲ್ ತಲುಪಿದರು. ತನ್ವಿ 21–13, 20–22, 21–16ರಲ್ಲಿ ಮಹಾರಾಷ್ಟ್ರದ ಅರುಂಧತಿ ಪಂತವಾನೆ ಎದುರು ಗೆದ್ದರು. ಅರುಂಧತಿ ಇಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದರು. ಮತ್ತೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ರಿತುಪರ್ಣ 21–17, 22–20ರಲ್ಲಿ ಸಯ್ಯಾಲಿ ಗೋಖಲೆ ಎದುರು ಗೆದ್ದರು.
ಮಿಶ್ರ ಡಬಲ್ಸ್ ತರುಣ್ ಕೋನಾ ಹಾಗೂ ಅಶ್ವಿನಿ ಪೊನ್ನಪ್ಪ ಅಂತಿಮ ಘಟ್ಟ ಪ್ರವೇಶಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಅವರು 21–13, 21–16ರಲ್ಲಿ ಸನಾವೆ ಥಾಮಸ್ ಹಾಗೂ ಪ್ರಜಕ್ತಾ ಸಾವಂತ್ ಎದುರು ಜಯ ಗಳಿಸಿದರು.
ಮತ್ತೊಂದು ನಾಲ್ಕರ ಘಟ್ಟದ ಪಂದ್ಯ ದಲ್ಲಿ ಕೆ.ನಂದಗೋಪಾಲ್ ಹಾಗೂ ಸಿಕಿ ರೆಡ್ಡಿ 21–14, 21–16ರಲ್ಲಿ ಟಿ.ಎಚ್.ಬಾಬು ಹಾಗೂ ಪೂರ್ವಿಶಾ ಎಸ್.ರಾಮ್ ಎದುರು ಗೆದ್ದರು.
ಮಹಿಳೆಯರ ಡಬಲ್ಸ್ನಲ್ಲಿ ಪ್ರಜಕ್ತಾ ಸಾವಂತ್ ಹಾಗೂ ಆರತಿ ಸಾರಾ ಸುನಿಲ್ 21–11, 21–12ರಲ್ಲಿ ಕರ್ನಾಟಕದ ವರ್ಷಾ ಬೆಳವಾಡಿ ಹಾಗೂ ಜಿ.ಎಂ.ನಿಶ್ಚಿತಾ ಎದುರು ಗೆದ್ದರು ಫೈನಲ್ ತಲುಪಿದರು. ಮತ್ತೊಂದು ಪಂದ್ಯದಲ್ಲಿ ಮೇಘನಾ ಹಾಗೂ ಸಿಕಿ ರೆಡ್ಡಿ 21–14, 21–17ರಲ್ಲಿ ಧನ್ಯಾ ನಾಯರ್ ಹಾಗೂ ಮೋಹಿತಾ ಸಹಾದೇವ್ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.