ನವದೆಹಲಿ (ಐಎಎನ್ಎಸ್): ರಾಷ್ಟ್ರದ ರಾಜಧಾನಿಯ ಹೊರವಲಯದಲ್ಲಿರುವ ಬಪ್ರೋಲಾ ಗ್ರಾಮದಲ್ಲಿ ಭಾನುವಾರ ದಿನವಿಡೀ ಹಬ್ಬದ ವಾತಾವರಣ. ಕಾರಣ ಈ ಊರಿನ ಹೆಮ್ಮೆಯ ಪುತ್ರ ಸುಶೀಲ್ ಕುಮಾರ್ ಅವರ ಬೆಳ್ಳಿಯ ಸಾಧನೆ.
ಬೆಳಿಗ್ಗೆಯಿಂದಲೇ ಗ್ರಾಮದ ಜನರು ಪ್ರಾರ್ಥಿಸಲು ಶುರು ಮಾಡಿದ್ದರು. ತಾಯಿ ಕಮಲಾ ದೇವಿ ಉಪವಾಸಕ್ಕೆ ಮೊರೆ ಹೋಗಿದ್ದರು. ತಂದೆ ದಿವಾನ್ ಸಿಂಗ್ ಅವರು ಸುಶೀಲ್ ಅಭಿಮಾನಿಗಳೊಂದಿಗೆ ಮಾತಿನಲ್ಲಿ ನಿರತರಾಗಿದ್ದರು. ಅವರ ನಿವಾಸದ ಮುಂದೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜೊತೆಗೆ ಮಾಧ್ಯಮದವರೂ ಆಗಮಿಸಿದ್ದರು.
ಪ್ರತಿ ಸುತ್ತಿನಲ್ಲಿ ಸುಶೀಲ್ ಗೆಲ್ಲುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಕೆಲವರು ಡ್ರಮ್ ಬಾರಿಸಿ ತಮ್ಮ ಖುಷಿ ವ್ಯಕ್ತಪಡಿಸುತ್ತಿದ್ದರು. ಅವರಿಗೆಲ್ಲಾ ಸುಶೀಲ್ ತಾಯಿ ಕಮಲಾ ಸಿಹಿ ತಿಂಡಿ ವಿತರಿಸುತ್ತಿದ್ದರು.
ಆದರೆ ಚಿನ್ನದ ಸಾಧನೆ ಮಾಡಲು ಸಾಧ್ಯವಾಗದ್ದಕ್ಕೆ ತಂದೆ ದಿವಾನ್ ಅವರಿಗೆ ಕೊಂಚ ಬೇಸರ. `ನನಗೆ ಸಿಟ್ಟು ಬಂದಿದೆ. ಏನು ಹೇಳಲೂ ನನಗೆ ಸಾಧ್ಯವಾಗುತ್ತಿಲ್ಲ. ಸುಶೀಲ್ ಚಿನ್ನದ ಪದಕವನ್ನೇ ಗೆಲ್ಲಬೇಕಿತ್ತು. ಅದೇಕೆ ತಪ್ಪಿ ಹೋಯಿತು ನನಗೆ ಗೊತ್ತಿಲ್ಲ~ ಎಂದು ಅವರು ನುಡಿದರು.
14ನೇ ವಯಸ್ಸಿನಲ್ಲಿ ಸುಶೀಲ್ ಅಭ್ಯಾಸ ಮಾಡಲು ಶುರು ಮಾಡಿದ್ದ ಛತ್ರಶಾಲಾ ಕ್ರೀಡಾಂಗಣದಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಯುವ ಕುಸ್ತಿಪಟುಗಳು ಕುಣಿದು ಕುಪ್ಪಳಿಸಿದರು. ಆರಂಭದ ದಿನಗಳಲ್ಲಿ ಇದೇ ಕ್ರೀಡಾಂಗಣದ ಮಣ್ಣಿನ ಅಖಾಡಾದಲ್ಲಿ ಸುಶೀಲ್ ಅಭ್ಯಾಸ ನಡೆಸಿ ಈ ಮಟ್ಟ ತಲುಪಿದ್ದಾರೆ. ಸುಶೀಲ್ ಸೇರಿದಂತೆ 20 ಕುಸ್ತಿಪಟುಗಳು ಹಾಸ್ಟೆಲ್ನ ಒಂದೇ ಕೊಠಡಿಯಲ್ಲಿ ಇದ್ದು ಅಭ್ಯಾಸ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.