ADVERTISEMENT

ಬೌಲರ್‌ಗಳ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 19:59 IST
Last Updated 8 ಜುಲೈ 2013, 19:59 IST

ಬೆಂಗಳೂರು: ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಜಮ್ಮು ಮತ್ತು ಕಾಶ್ಮೀರದ ಮೊದಲ ಆಟಗಾರ ಎನಿಸಿರುವ ಪರ್ವೇಜ್ ರಸೂಲ್ ಒಳಗೊಂಡಂತೆ ಒಟ್ಟು 20 ಬೌಲರ್‌ಗಳು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಸೋಮವಾರ ಆರಂಭವಾದ ಉದಯೋನ್ಮುಖ ಬೌಲರ್‌ಗಳ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಬೌಲರ್‌ಗಳ ದೈಹಿಕ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಅಧಿಕ ಒತ್ತು ನೀಡಿರುವ ಈ ಶಿಬಿರ ಎರಡು ವಾರಗಳ ಕಾಲ ನಡೆಯಲಿದೆ. ರಸೂಲ್ ಅಲ್ಲದೆ, ಜಿಂಬಾಬ್ವೆ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬ ಬೌಲರ್ ಮೋಹಿತ್ ಶರ್ಮ ಕೂಡಾ ಶಿಬಿರದಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿ ಜುಲೈ 24 ರಿಂದ ಆರಂಭವಾಗಲಿದೆ. ಈ ಸರಣಿಗೆ ಹಿರಿಯ ಆಟಗಾರರಿಗ ವಿಶ್ರಾಂತಿ ನೀಡಿರುವ ಕಾರಣ ಯುವ ಆಟಗಾರರಿಗೆ ಭಾರತ ತಂಡದಲ್ಲಿ ಅವಕಾಶ ಲಭಿಸಿದೆ.

ಎನ್‌ಸಿಎನಲ್ಲಿ ಇದರ ಜೊತೆಗೆ ಇನ್ನೊಂದು ಶಿಬಿರಕ್ಕೂ ಚಾಲನೆ ಲಭಿಸಿದೆ. 19 ವರ್ಷಕ್ಕಿಂತ ಮೇಲಿನ ಯುವ ಆಟಗಾರರು ಇದರಲ್ಲಿ ಪಾಲ್ಗೊಂಡಿದ್ದಾರೆ. ಭಾರತ ತಂಡದ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ, ವಿಕೆಟ್ ಕೀಪರ್ ದೀಪ್ ದಾಸ್‌ಗುಪ್ತಾ ಮತ್ತು ಆಲ್‌ರೌಂಡರ್ ಸಂಜಯ್ ಬಾಂಗರ್ ಶಿಬಿರದಲ್ಲಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕರ್ನಾಟಕದ ಬ್ಯಾಟ್ಸ್‌ಮನ್ ಶ್ರೇಯಸ್ ಗೋಪಾಲ್ ಕೂಡಾ ಶಿಬಿರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.