ಇಪೊ: ಯುವ ಭಾರತ ಹಾಕಿ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ. ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಐರ್ಲೆಂಡ್ ತಂಡವನ್ನು ಎದುರಿಸಲಿರುವ ಭಾರತ ಭಾರಿ ಅಂತರದ ಜಯದ ನಿರೀಕ್ಷೆಯಲ್ಲಿದೆ.
ಒಂದು ಸೋಲು ಮತ್ತು ಎರಡು ಪಂದ್ಯಗಳಲ್ಲಿ ಡ್ರಾ ಆದ ನಂತರ ಬುಧವಾರ ಮಲೇಷ್ಯಾವನ್ನು 5–1ರಿಂದ ಮಣಿಸಿದ ಭಾರತದ ಫೈನಲ್ ಆಸೆ ಗರಿಗೆದರಿತ್ತು. ಆದರೆ ಈ ಹಾದಿ ಸುಗಮ ಆಗಬೇಕಾದರೆ ಐರ್ಲೆಂಡ್ ತಂಡದ ವಿರುದ್ಧ ಪೂರ್ಣ ಆಧಿಪತ್ಯ ಸ್ಥಾಪಿಸಬೇಕು.
ಮೊದಲ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 2–3ರಿಂದ ಸೋತಿದ್ದ ಭಾರತ ನಂತರ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿತ್ತು. ಆಸ್ಟ್ರೇಲಿಯಾ ಎದುರು ಭಾರಿ ಅಂತರದಿಂದ ಸೋತಿತ್ತು. ಆಡಿದ ನಾಲ್ಕೂ ಪಂದ್ಯಗಳನ್ನು ಸೋತಿರುವ ಐರ್ಲೆಂಡ್ ಕೊನೆಯ ಪಂದ್ಯದಲ್ಲಿ ಸಮಾಧಾನಕರ ಗೆಲುವಿಗೆ ಶ್ರಮಿಸಲಿದೆ. ಆದರೆ ಭಾರತಕ್ಕೆ ಈ ತಂಡವನ್ನು ಮಣಿಸುವುದು ಸವಾಲು ಆಗಲಾರದು.
ಅನುಭವಿ ಆಟಗಾರ ಸರ್ದಾರ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ಯುವ ಆಟಗಾರರ ತಂಡವನ್ನು ಈ ಟೂರ್ನಿಯಲ್ಲಿ ಕಣಕ್ಕೆ ಇಳಿಸಿದೆ. ಈ ತಂಡ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಡವಬೇಕಾದ ಸಮಯ ಈಗ ಸನ್ನಿಹಿತವಾಗಿದೆ. ನಾಯಕ ಮತ್ತು ಕೋಚ್ ಶೊರ್ಡ್ ಮ್ಯಾರಿಜ್ ಅವರಿಗೂ ಈ ಪಂದ್ಯ ಮಹತ್ವದ್ದಾಗಲಿದೆ.
ಮಲೇಷ್ಯಾ ವಿರುದ್ಧ ಗೋಲು ಗಳಿಸಿದ ಶಿಲಾನಂದ ಲಾಕ್ರಾ, ಗುರ್ಜಂತ್ ಸಿಂಗ್, ಸುಮಿತ್ ಕುಮಾರ್ ಮತ್ತು ರಮಣ್ದೀಪ್ ಸಿಂಗ್ ಅವರ ಮೇಲೆ ಶುಕ್ರವಾರದ ಪಂದ್ಯದಲ್ಲೂ ನಿರೀಕ್ಷೆಯ ಭಾರ ಇದೆ. ಶುಕ್ರವಾರ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾ ತಂಡಗಳು ಸೆಣಸಲಿವೆ. ರೌಂಡ್ ರಾಬಿನ್ ಹಂತದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಮಲೇಷ್ಯ ತಂಡಗಳು ಸೆಣಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.