ಬರ್ಮಿಂಗ್ಹ್ಯಾಮ್ : ‘ಚಾಂಪಿ ಯನ್ಸ್ ಟ್ರೋಫಿಯಲ್ಲಿ ಇಲ್ಲಿಯವರೆಗೆ ಉತ್ತಮ ಕ್ರಿಕೆಟ್ ಆಡಿದ್ದೇವೆ. ಆದ್ದರಿಂದ ಫೈನಲ್ ಪ್ರವೇಶಿಸಲು ಸಾಧ್ಯವಾಗಿದೆ. ಅಂತಿಮ ಹಣಾಹಣಿಯಲ್ಲೂ ನಾವು ಗೆಲ್ಲುತ್ತೇವೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭರವಸೆಯಿಂದ ನುಡಿದರು.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಪಾಕಿಸ್ತಾನ ತಂಡವನ್ನು ಕೊಂಡಾಡಲು ಮರೆಯಲಿಲ್ಲ. ‘ನಮ್ಮ ತಂಡ ಉತ್ತಮ ಲಯದಲ್ಲಿದೆ. ಹೀಗಾಗಿ ಪಾಕಿಸ್ತಾನ ವಿರುದ್ಧದ ಫೈನಲ್ ನಲ್ಲಿ ವಿಶೇಷ ತಂತ್ರಗಳನ್ನು ಬಳಸುವ ಅಗತ್ಯವಿಲ್ಲ. ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ್ದೇವೆ. ಅದೇ ಫಲಿತಾಂಶವನ್ನು ಫೈನಲ್ ಪಂದ್ಯದಲ್ಲೂ ನಿರೀಕ್ಷಿಸಬಹುದು.
ಇದಕ್ಕೆ ಏನೇನು ಮಾಡಬೇಕಿದೆಯೋ ಅದನ್ನು ಮಾಡುತ್ತೇವೆ’ ಎಂದು ಹೇಳಿದ ಕೊಹ್ಲಿ ‘ಎದುರಾಳಿಗಳ ಬಲ ಮತ್ತು ದೌರ್ಬಲ್ಯದ ಅರಿವಿದ್ದುಕೊಂಡೇ ಈ ಮಾತು ಆಡುತ್ತಿದ್ದೇನೆ’ ಎಂದರು. ಮೊದಲ ಸೆಮಿಫೈನಲ್ನಲ್ಲಿ ಪಾಕಿಸ್ತಾನ ಆತಿಥೇಯ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿತ್ತು. ಗುರುವಾರ ನಡೆದ ಎರಡನೇ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶವನ್ನು ಭಾರತ ಒಂಬತ್ತು ವಿಕೆಟ್ಗಳಿಂದ ಮಣಿಸಿತ್ತು. ಈ ವಿಷಯದ ಬಗ್ಗೆ ಕೇಳಿದಾಗ ‘ಹಿಂದಿನ ಫಲಿತಾಂಶದ ಕನವರಿಕೆಯಲ್ಲಿದ್ದು ಕೊಂಡು ಆಡಿದರೆ ಫಲ ಏನಾಗುತ್ತದೆ ಎಂದು ಹೇಳುವುದು ಕಷ್ಟ’ ಎಂದರು.
‘ಟೂರ್ನಿಯಲ್ಲಿ ಪಾಕಿಸ್ತಾನ ಉತ್ತಮವಾಗಿ ಆಡಿದೆ. ಫೈನಲ್ಗೆ ತಲುಪಿದ ತಂಡವೊಂದನ್ನು ಲಘುವಾಗಿ ಪರಿಗಣಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು ‘ಫೈನಲ್ ಪಂದ್ಯದ ಬಗ್ಗೆ ಅತಿಯಾದ ಆತಂಕ ಇರಿಸಿಕೊಂಡರೆ ಮನಸ್ಥಿತಿಯೇ ಬದಲಾಗುವ ಸಾಧ್ಯತೆ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.