ADVERTISEMENT

ಮುರಳೀಧರನ್ ಬೌಲಿಂಗ್: ಅಂಪೈರ್‌ಗಳಿಗೆ ಸಂಶಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:55 IST
Last Updated 10 ಮಾರ್ಚ್ 2011, 18:55 IST

ಮೆಲ್ಬರ್ನ್ (ಪಿಟಿಐ): ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಬೌಲಿಂಗ್ ಶೈಲಿಯ ಬಗ್ಗೆ ಸದ್ಯದ ಬಹುತೇಕ ಅಂಪೈರ್‌ಗಳಿಗೆ ಸಂಶಯವಿದೆ. ಆದರೆ ಅವರ ಬೌಲಿಂಗ್‌ಗೆ ತಡೆಯೊಡ್ಡಿ ವಿವಾದ ಮೈಮೇಲೆ ಎಳೆದುಕೊಳ್ಳಲು ಹೆದರುತ್ತಾರೆ ಎಂದು ವಿವಾದಿತ ಮಾಜಿ ಅಂಪೈರ್ ಡರೆಲ್ ಹೇರ್ ಹೇಳಿದ್ದಾರೆ. 1995ರಲ್ಲಿ ಮುರಳಿ ಬೌಲಿಂಗ್ ಅನ್ನು ‘ಚೆಕ್ಕಿಂಗ್’ ಎಂದು ಆರೋಪಿಸಿದ್ದ ಹೇರ್, ಬೌಲಿಂಗ್‌ಗೆ ತಡೆಯೊಡ್ಡಿದ್ದರು. ಅವರು 2008ರಲ್ಲಿ ಐಸಿಸಿ ಎಲೈಟ್ ಅಂಪೈರ್ ಗ್ರೂಪ್‌ನಿಂದ ಹೊರಬಂದಿದ್ದರು.
ಪತ್ರಿಕೆಯೊಂದಿಗೆ ನೀಡಿರುವ ಸಂದರ್ಶನದಲ್ಲಿ ಅವರು, ‘ಕೆಲವು ಅಂಪೈರ್‌ಗಳು ನನಗೆ ಈ ಬಗ್ಗೆ ಹೇಳಿದ್ದಾರೆ. ಆದರೆ ಅವರು ಮುರಳಿ ಬೌಲಿಂಗ್ ಮಾಡಿಕೊಳ್ಳಲಿ ಬಿಡಿ ಎಂಬ ಮನೋಭಾವದಿಂದ ಸುಮ್ಮನಿದ್ದಾರೆ’ ಎಂದಿದ್ದಾರೆ.

‘ಮುರಳೀ ಆ್ಯಕ್ಷನ್‌ನಲ್ಲಿ ಹಲವು ತಪ್ಪುಗಳಿರುವುದು ಖಚಿತ. ಆದರೆ, ಹೋಗಲಿ ಬಿಡಿ ಎನ್ನುತ್ತಿರುವ ಅಂಪೈರ್‌ಗಳು ಇದರೊಂದಿಗೆ ಜೀವಿಸಬೇಕು’ ಎಂದು ಲೇವಡಿ ಮಾಡಿದ್ದಾರೆ. ‘ಅಂಪೈರ್‌ಗಳು ಕ್ರಿಕೆಟ್‌ನ ನಿಯಮಗಳನ್ನು ಗೌರವಿಸಿ ರಕ್ಷಿಸಬೇಕು. ನಿಯಮಗಳನ್ನು ಕಟ್ಟುನಿಟ್ಟಾಗಿ ಎತ್ತಿಹಿಡಿಯುವುದರಿಂದ ತಂಡಗಳು ಹೆದರುತ್ತವೆ.

ಆಟಗಾರರು ಶಿಸ್ತು ಕಾಪಾಡಿಕೊಳ್ಳುತ್ತಾರೆ. ಇದರಿಂದ ಉತ್ತಮ ಕ್ರಿಕೆಟ್ ಉಳಿಯುತ್ತದೆ. ಹಣ ಗಳಿಕೆಗಾಗಿ ದುಡಿಯುವ ಅಂಪೈರ್‌ಗಳಂತೆ ನಾನಲ್ಲ’ ಎಂದು ಹೇಳಿದ್ದಾರೆ.‘ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿಯೂ ಮುರಳಿ ಬೌಲಿಂಗ್ ಗಮನಿಸುತ್ತಿದ್ದೇನೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮುತ್ತಯ್ಯ ಹಾಕಿದ ಕೆಲವು ಎಸೆತಗಳು ಸಂಶಯಾಸ್ಪದವಾಗಿದ್ದವು. ಅವುಗಳ ಬಗ್ಗೆ ತನಿಖೆ ನಡೆಯಬೇಕು’ ಎಂದರು.

‘ಇದು ಮುತ್ತಯ್ಯಗೆ ಕೊನೆಯ ವಿಶ್ವಕಪ್ ಟೂರ್ನಿ. ಅಪಾರ ಅಭಿಮಾನಿ ಬಳಗದ ಮುಂದೆ ಅವರು ಬೀಳ್ಕೊಡಲಿದ್ದಾರೆ. ಈ ಬಗ್ಗೆ ಯಾವ ಅಂಪೈರ್ ಕೂಡ ತಲೆಕೆಡಿಸಿಕೊಂಡಿಲ್ಲ. ಯಾರೂ ಕ್ರಮ ತೆಗೆದುಕೊಳ್ಳಬೇಕಾದ ಕೆಲಸಕ್ಕೆ  ಮುಂದಾಗುತ್ತಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.