ಬೆಂಗಳೂರು: ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗಾ ಮೊದಲ ಎಸೆತದಲ್ಲಿಯೇ ಕ್ಲೀನ್ ಬೌಲ್ಡ್!
ಅಚ್ಚರಿಗೆ ಒಳಗಾಗಬೇಡಿ. ಗಲಿಬಿಲಿಗೂ ಸಿಲುಕಬೇಡಿ. ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪ್ರಕಟಿಸಿ12 ವರ್ಷ ಉರುಳಿದರೂ ರಣತುಂಗಾ ಇನ್ನೂ ಎಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಎನ್ನುವ ಕುತೂಹಲ ನಿಮ್ಮಲ್ಲಿ ಮೂಡಬಹುದು. ಇದಕ್ಕೆ ಬುಧವಾರ ಸೆಂಟ್ರಲ್ ಕಾಲೇಜು ಕ್ರೀಡಾಂಗಣದಲ್ಲಿ ಉತ್ತರ ಸಿಕ್ಕಿತು.
ಅಂಧರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ವೀಕ್ಷಿಸಲು ಅವರು ಉದ್ಯಾನನಗರಿಗೆ ಆಗಮಿಸಿದ್ದಾರೆ. ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದ ಬಳಿಕ ಅವರು ಒಂದು ಓವರ್ನ ಪ್ರದರ್ಶನ ಪಂದ್ಯದಲ್ಲಿ ಆಡಿದರು.
ವಿಶ್ವಕಪ್ ಆಯೋಜಿಸಿರುವ ಸಮರ್ಥನಂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಜಿ.ಕೆ. ಅವರು ಎಸೆದ ಮೊದಲ ಎಸೆತದಲ್ಲಿ ರಣತುಂಗಾ ಬೌಲ್ಡ್ ಆದರು. ನಂತರದ ಎಸೆತದಲ್ಲಿ ಜೋರಾಗಿ ಚೆಂಡನ್ನು ಬಾರಿಸುವ ಮೂಲಕ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.