ಬಳ್ಳಾರಿ: ಅಂಧರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದ ಶಿಬಿರಕ್ಕೆ ರಾಜ್ಯದ ಆಟಗಾರರನ್ನು ಆಯ್ಕೆ ಮಾಡಲು ರಾಜ್ಯ ಅಂಧರ ಕ್ರಿಕೆಟ್ ಸಂಸ್ಥೆ ಬಳ್ಳಾರಿಯಲ್ಲಿ ಇದೇ 5ರಿಂದ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಹಮ್ಮಿಕೊಂಡಿದೆ.
‘ಮೂರು ದಿನ ನಗರದ ವಿಮ್ಸ್ ಮೈದಾನದಲ್ಲಿ ಟೂರ್ನಿ ನಡೆಯಲಿದ್ದು 12 ತಂಡಗಳು ಪಾಲ್ಗೊಳ್ಳಲಿವೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿರುವ ಟೂರ್ನಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗ ನೀಡಿದೆ’ ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಿ.ಕೆ. ಮಹಾಂತೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಏಕದಿನ ವಿಶ್ವಕಪ್ 2018ರ ಜನವರಿಯಲ್ಲಿ ದುಬೈನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಭಾರತ ತಂಡದ ಶಿಬಿರ ಜರುಗಲಿದ್ದು, ಉತ್ತಮ ಪ್ರದರ್ಶನ ನೀಡಿದವರನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ.
‘ಅಂಧರು ಆಡುವ ಕ್ರಿಕೆಟ್ ಚೆಂಡು ಭಾರತದಲ್ಲಿ ದೊರಕುವುದಿಲ್ಲ. ಪಾಕಿಸ್ತಾನದಲ್ಲಿ ತಯಾರಾಗುವುದರಿಂದ ಅಲ್ಲಿಂದಲೇ ಸಗಟು ದರದಲ್ಲಿ ಖರೀದಿಸಿ ತರಲಾಗುವುದು’ ಎಂದು ಮಹಾಂತೇಶ್ ಹೇಳಿದರು.
5 ಲಕ್ಷ: ‘ಟೂರ್ನಿಗೆ ಒಟ್ಟು ₹10 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಿದ್ದು, ರೆಡ್ ಕ್ರಾಸ್ ಸಂಸ್ಥೆಯಿಂದ ₹5 ಲಕ್ಷ ನೀಡಲಾಗುವುದು’ ಎಂದು ಬಳ್ಳಾರಿ ಜಿಲ್ಲೆಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಾಕೀಬ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.