ADVERTISEMENT

ರಾಷ್ಟ್ರೀಯ ಕ್ರೀಡಾಕೂಟ-ಪದಕಗಳ ಕೊರತೆ, ಸಮಾರಂಭ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 17:20 IST
Last Updated 23 ಫೆಬ್ರುವರಿ 2011, 17:20 IST

ರಾಂಚಿ (ಪಿಟಿಐ): ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ನೀಡಲು ಪದಕಗಳ ಕೊರತೆ ಇರುವುದರಿಂದ ಪದಕ ವಿತರಣಾ ಸಮಾರಂಭವನ್ನು ಮುಂದೂಡುವಂತ ಪರಿಸ್ಥಿತಿ ಕ್ರೀಡಾಕೂಟದ ಆಯೋಜಕರಿಗೆ ಎದುರಾಗಿದೆ.

‘ಮೊದಲು ನಿರ್ಧರಿಸಿದಂತೆ ಫೆ 25ರಂದು ಮೆಗಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪದಕ ವಿತರಣಾ ಸಮಾರಂಭ ನಡೆಯಬೇಕಿತ್ತು. ಆದರೆ ಟೇಬಲ್ ಟೆನಿಸ್‌ನಲ್ಲಿ ಪದಕ ಗೆದ್ದ ಆಟಗಾರರಿಗೆ ನೀಡಲು ಪದಕ ಇಲ್ಲದಿರುವುದರಿಂದ ಸಮಾರಂಭವನ್ನು ಮುಂದೂಡಬೇಕಾಯಿತು’ ಎಂದು ಕ್ರೀಡಾಕೂಟದ ನಿರ್ದೇಶಕ ವಿ.ಕೆ. ಬಾವಾ ಹೇಳಿದ್ದಾರೆ. ಐಟಿಟಿಎಫ್ ನಿಯಮಾವಳಿ ಪ್ರಕಾರ ಫೈನಲ್ ಪಂದ್ಯಗಳು ನಡೆಯುವ ದಿನವೇ ಪದಕಗಳನ್ನು ನೀಡಬೇಕು. ಆದರೆ ಪದಕಗಳ ಕೊರತೆ ಇರುವುದರಿಂದ ಕಾರ್ಯಕ್ರಮವನ್ನೇ ಮುಂದೂಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದಿದ್ದಾರೆ.

‘ಪದಕವಿಲ್ಲದ ಕಾರಣ ಸಮಾರಂಭವನ್ನು ಮುಂದೂಡಿರುವ ಘಟನೆ ಮುಜುಗರ ಉಂಟು ಮಾಡಿದೆ.  ಈ ಕುರಿತು ಕ್ರೀಡಾಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹಶ್ಮಿ ಅವರಿಗೂ ಈ ಮುಂಚಿತವಾಗಿ ಎಚ್ಚರಿಕೆ ವಹಿಸುವಂತೆ ಹೇಳಲಾಗಿತ್ತು. ಆದರೂ ಇಂತಹ ಅಚಾತುರ್ಯ ನಡೆದಿರುವುದು ತಲೆ ತಗ್ಗಿಸುವಂತಾಗಿದೆ’ ಎಂದು ವಿ.ಕೆ. ಬಾವಾ ನುಡಿದಿದ್ದಾರೆ.

ಕೊಕ್ಕೊ ಕರ್ನಾಟಕ ತಂಡಕ್ಕೆ ಸೋಲು: ಕರ್ನಾಟಕ ಪುರುಷ ಕೊಕ್ಕೊ ತಂಡದವರು ಫೈನಲ್ ಪಂದ್ಯದಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬುಧವಾರ ನಡೆದ ಪಂದ್ಯದಲ್ಲಿ ಮಹಾರಾಷ್ಟ್ರ 25-10ರಲ್ಲಿ ಕರ್ನಾಟಕವನ್ನು ಮಣಿಸಿತು. ಮಹಿಳೆಯರ ವಿಭಾಗದಲ್ಲಿ ಕೇರಳ 17-15ರಲ್ಲಿ ಮಹಾರಾಷ್ಟ್ರವನ್ನು ಸೋಲಿಸಿ ಚಾಂಪಿಯನ್ ಆಯಿತು.

ಕಂಚು ಗೆದ್ದ ಶೌರಿ ದೇವಿ ಚಂದ್ರ : ಕರ್ನಾಟಕದ ಶೋರಿ ದೇವಿ ಚಂದ್ರ ಅವರು ಲೈಟ್‌ವೇಟ್ ಸ್ಪರ್ಧೆಯ 58ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.