ADVERTISEMENT

ವಿಚಾರಣೆಗೆ ಹಾಜರಾಗಲು ಮೋದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2010, 9:45 IST
Last Updated 29 ಡಿಸೆಂಬರ್ 2010, 9:45 IST

ಚೆನ್ನೈ (ಪಿಟಿಐ): ಹಣಕಾಸಿನ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಮುಖ್ಯಸ್ಥ ಲಲಿತ್ ಮೋದಿ ಹಾಗೂ ಇತರ ಆರು ಮಂದಿಗೆ ನೋಟಿಸ್ ಜಾರಿಗೊಳಿಸಿದೆ. ಮೋದಿ ಅಲ್ಲದೆ ಕುನಾಲ್ ದಾಸ್‌ಗುಪ್ತ, ವೇಣು ನಾಯರ್, ಆಂಡ್ರ್ಯೂ ಜಾರ್ಜಿಯೊ, ಸೀಮಸ್ ಒಬ್ರಿಯಾನ್, ಹರೀಶ್ ಕೃಷ್ಣಮಾಚಾರ್ ಮತ್ತು ಅಜಯ್ ವರ್ಮಾ ಅವರಿಗೆ ಜನವರಿ ಮೊದಲ ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಎನ್. ಶ್ರೀನಿವಾಸನ್ ಅವರು ಮೋದಿ ಹಾಗೂ ಇತರರ ವಿರುದ್ದ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಸುಮಾರು 470 ಕೋಟಿ ರೂ. ಮೊತ್ತದ ಅವ್ಯವಹಾರ ನಡೆಸಿದ ಆರೋಪವನ್ನು ಮೋದಿ ಎದುರಿಸುತ್ತಿದ್ದಾರೆ. ಐಪಿಎಲ್‌ನ ಮಾಧ್ಯಮ ಹಕ್ಕು ಹಾಗೂ ಇತರ ವಾಣಿಜ್ಯ ಹಕ್ಕುಗಳನ್ನು ನೀಡುವ ವೇಳೆ ಮೋದಿ ಅಕ್ರಮ ಎಸಗಿದ್ದಾರೆ ಎಂದು ಬಿಸಿಸಿಐ ತನ್ನ ದೂರಿನಲ್ಲಿ ತಿಳಿಸಿತ್ತು. ಶ್ರೀನಿವಾಸನ್ ನೀಡಿದ್ದ ದೂರಿನಂತೆ ಸಿಸಿಬಿ ಪೊಲೀಸರು ಅಕ್ಟೋಬರ್ ತಿಂಗಳಲ್ಲಿ ಮೋದಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.