ADVERTISEMENT

ಶ್ರೀನಿವಾಸನ್, ಶಾ ತರಾಟೆಗೆ

ಬಿಸಿಸಿಐ ವಿಶೇಷ ಸಾಮಾನ್ಯ ಸಭೆಗೆ ಹಾಜರಾಗಿದ್ದರು

ಪಿಟಿಐ
Published 14 ಜುಲೈ 2017, 19:30 IST
Last Updated 14 ಜುಲೈ 2017, 19:30 IST
ಎನ್‌. ಶ್ರೀನಿವಾಸನ್‌
ಎನ್‌. ಶ್ರೀನಿವಾಸನ್‌   

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಗೆ ಹಾಜರಾಗಿದ್ದ ಎನ್. ಶ್ರೀನಿವಾಸನ್ ಮತ್ತು ನಿರಂಜನ್ ಶಾ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಅವರಿಬ್ಬರಿಗೂ ನೋಟಿಸ್‌ ಕೂಡ ಜಾರಿ ಮಾಡಿದ್ದು, ಜುಲೈ 24ರಂದು ನಡೆಯುವ ವಿಚಾರಣೆಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿದೆ.

ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸಲ್ಲಿಸಿರುವ ವರದಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಎ.ಎಂ. ಕಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರ ಪೀಠವು ಶುಕ್ರವಾರ ನಡೆಸಿತು.

ADVERTISEMENT

‘ಬಿಸಿಸಿಐ ಮತ್ತು ಅಧೀನ ರಾಜ್ಯ ಸಂಸ್ಥೆಗಳ ಸದಸ್ಯತ್ವದಿಂದಲೇ  ಅನರ್ಹ ಗೊಂಡ ಇಬ್ಬರೂ ವ್ಯಕ್ತಿಗಳು ಹಾಜ ರಾಗಿದ್ದು ಹೇಗೆ?’ ಎಂದು ನ್ಯಾಯಪೀಠವು ಪ್ರಶ್ನಿಸಿದೆ.

ಕ್ರಿಕೆಟ್  ಆಡಳಿತದ ಸುಧಾರಣೆಗಾಗಿ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯು ನೀಡಿರುವ ಶಿಫಾರಸುಗಳ ಅನ್ವಯ 70 ವರ್ಷ ದಾಟಿದ ವ್ಯಕ್ತಿಗಳು ಬಿಸಿಸಿಐ ಮತ್ತು ರಾಜ್ಯ ಸಂಸ್ಥೆಗಳ ಪದಾಧಿಕಾರಿ ಸ್ಥಾನದಿಂದ ಅನರ್ಹರಾಗುತ್ತಾರೆ. ಅದರ ಪ್ರಕಾರ ನಿರಂಜನ್ ಶಾ ಅನರ್ಹಗೊಂಡಿದ್ದರು. ಶ್ರೀನಿವಾಸನ್ ಕೂಡ ಇದೇ ನಿಯದಡಿಯಲ್ಲಿ ಅನರ್ಹರಾಗಿದ್ದಾರೆ. ಅಲ್ಲದೇ ಅವರು 2014ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಗೊಂಡಿದ್ದರು.

ಆದರೆ ಶ್ರೀನಿವಾಸನ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆ ಮತ್ತು ನಿರಂಜನ್ ಶಾ ಅವರು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳಾಗಿ ಬಿಸಿಸಿಐ ಸಭೆಗಳಲ್ಲಿ ಭಾಗವಹಿಸುತ್ತಿದ್ದರು.

ಈಚೆಗೆ ಆಯೋಜಿಸಲಾಗಿದ್ದ ವಿಶೇಷ ಸಭೆಯನ್ನು ತಮ್ಮ ಬೆಂಬಲಿಗ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸೇರಿ ಬಹಿಷ್ಕರಿಸಿದ್ದರು. ಅದರಿಂದಾಗಿ ಸಭೆಯನ್ನೇ ರದ್ದುಗೊಳಿಸಲಾಗಿತ್ತು.

ಅದರ ನಂತರ ‘ಶ್ರೀನಿವಾಸನ್ ಮತ್ತು ಶಾ ಅವರು ಸಭೆಯಲ್ಲಿ ಭಾಗ ವಹಿಸಬೇಕೋ ಅಥವಾ ಬೇಡವೋ ಎಂಬ ಸ್ಪಷ್ಟ ನಿರ್ದೇಶನ ನೀಡಬೇಕು’ ಎಂದು ಸಿಒಎ ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.