ಬೆಂಗಳೂರು: ರಾಯಲ್ ಚಾಲೆಂ ಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಕಿರು ಇತಿಹಾಸದಲ್ಲಿ ಎರಡು ಸಲ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತವಾಗಿತ್ತು.
2009 ರಲ್ಲಿ ಹಾಗೂ ಕಳೆದ ವರ್ಷದ ಟೂರ್ನಿಯಲ್ಲಿ ಆರ್ಸಿಬಿ ಫೈನಲ್ನಲ್ಲಿ ಎಡವಿ `ರನ್ನರ್ ಅಪ್~ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಡೇನಿಯಲ್ ವೆಟೋರಿ ನೇತೃತ್ವದಲ್ಲಿ ಕಣಕ್ಕಿಳಿಯಲಿರುವ ಬೆಂಗಳೂರಿನ ತಂಡ ಈ ಬಾರಿ ಕಿರೀಟ ಮುಡಿಗೇರಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಐದನೇ ಅವತರಣಿಕೆಯ ಟೂರ್ನಿಗೆ ಆರ್ಸಿಬಿ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ನಾಯಕ ವೆಟೋರಿ ಸೋಮವಾರ ತಿಳಿಸಿದರು.
`ಐಪಿಎಲ್ನ ಐದನೇ ಅವತರಣಿಕೆಯ ಟೂರ್ನಿ ಸವಾಲಿನಿಂದ ಕೂಡಿರಲಿದೆ. ಪ್ರಶಸ್ತಿ ಗೆಲ್ಲುವುದೇ ನಮ್ಮ ಏಕೈಕ ಉದ್ದೇಶ. ನಮ್ಮ ತಂಡ ಬಲಿಷ್ಠವಾಗಿದೆ. ಕೆಲವು ಹೊಸ ಆಟಗಾರರು ಸೇರಿಕೊಂಡಿದ್ದಾರೆ. ತಂಡದಲ್ಲಿರುವ ಯುವ ಆಟಗಾರರು ಶ್ರೇಷ್ಠ ಆಟ ತೋರುವ ಹುಮ್ಮಸ್ಸಿನಲ್ಲಿದ್ದಾರೆ. ಆರ್ಸಿಬಿ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸ ನನ್ನದು~ ಎಂದರು.
ಕ್ರಿಸ್ ಗೇಲ್ ಬಗ್ಗೆ ಮಾತನಾಡಿದ ವೆಟೋರಿ, `ಕ್ರಿಸ್ ಎಂತಹ ಆಟಗಾರ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕಳೆದ ವರ್ಷದಂತೆ ಈ ವರ್ಷವೂ ಅವರು ಎಲ್ಲ ಪಂದ್ಯಗಳಲ್ಲಿ ಮಿಂಚಬೇಕೆಂಬುದು ನಮ್ಮ ಬಯಕೆ. ತಮ್ಮ ಸಾಮರ್ಥ್ಯ ತೋರಿಸಲು ಉತ್ಸುಕರಾದ ಇತರ ಕೆಲವು ಆಟಗಾರರೂ ತಂಡದಲ್ಲಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ಆಕರ್ಷಕ ಪ್ರದರ್ಶನ ನೀಡಿದ್ದರು. ಇವರಿಬ್ಬರು ತಂಡದ ಪ್ರಧಾನ ಆಟಗಾರರು~ ಎಂದರು.
`ಮುತ್ತಯ್ಯ ಮುರಳೀಧರನ್ ಕೂಡಾ ಈ ಬಾರಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಅವರು ಅಂತಿಮ ಇಲೆವೆನ್ನಲ್ಲಿ ಸ್ಥಾನ ಪಡೆಯಲು ಚಾರ್ಲ್ ಲಾಂಗ್ವೆಲ್ಟ್ ಮತ್ತು ಡಿರ್ಕ್ ನಾನೆಸ್ ಜೊತೆ ಪೈಪೋಟಿ ನಡೆಸಬೇಕಿದೆ. ಮುರಳಿ ಹೊಂದಿರುವ ಅಪಾರ ಅನುಭವ ತಂಡದ ನೆರವಿಗೆ ಬರಲಿದೆ~ ಎಂದು ವೆಟೋರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.