ಬೆಂಗಳೂರು: ಕೆ.ಎಲ್. ರಾಹುಲ್ ಹಾಗೂ ಕುನಾಲ್ ಕಪೂರ್ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡ ಸಿ.ಕೆ. ನಾಯ್ಡು ಟ್ರೋಫಿ (25 ವರ್ಷದೊಳಗಿನವರು) ಕ್ರಿಕೆಟ್ ಟೂರ್ನಿಯ ಎಲೈಟ್ `ಎ~ ಗುಂಪಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.
ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಶಾಲೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 109.4 ಓವರ್ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 488 ರನ್ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯರು 51.5 ಓವರ್ಗಳಲ್ಲಿ 2 ವಿಕೆಟ್ಗೆ 190 ರನ್ ಗಳಿಸಿದ್ದರು. ಗುಜರಾತ್ ಮೂರನೇ ದಿನವಾದ ಭಾನುವಾರದ ಅಂತ್ಯಕ್ಕೆ 7 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16 ರನ್ ಗಳಿಸಿದೆ.
ರಾಹುಲ್ ದ್ವಿಶತಕ: ಗಣೇಶ್ ಸತೀಶ್ ನೇತೃತ್ವದ ಕರ್ನಾಟಕ ತಂಡ ಮೊದಲ ದಿನ ಆರಂಭಿಕ ಸಂಕಷ್ಟಕ್ಕೆ ಒಳಗಾಗಿತ್ತು. ಈ ವೇಳೆ ಆಸರೆಯಾದ ರಾಹುಲ್ ಗುಜರಾತ್ ಬೌಲರ್ಗಳನ್ನು ಚೆನ್ನಾಗಿಯೇ ಕಾಡಿದರು.
ರಾಹುಲ್ 317 ಎಸೆತಗಳಲ್ಲಿ 213 ರನ್ ಕಲೆ ಹಾಕಿದರು. ಇದರಲ್ಲಿ 24 ಬೌಂಡರಿ ಹಾಗೂ ಆರು ಸಿಕ್ಸರ್ಗಳು ಸೇರಿವೆ. ಮೊದಲ ದಿನದಾಟದ ಅಂತ್ಯಕ್ಕೆ ಬಲಗೈ ಬ್ಯಾಟ್ಸ್ಮನ್ 94 ರನ್ ಗಳಿಸಿದ್ದರು. ನಿರಂತರ ಮಳೆ ಸುರಿದ ಕಾರಣ ಎರಡನೇ ದಿನ ಮಳೆಯ `ಆಟ~ ಮಾತ್ರ ನಡೆದಿತ್ತು. ಈ ಆಟಗಾರ ಮೊದಲ ದಿನವೇ ಮೂರೂವರೆ ಗಂಟೆ ಕಾಲ ಕ್ರೀಸ್ಗೆ ಕಚ್ಚಿಕೊಂಡು ನಿಂತು ತಂಡವನ್ನು ಆರಂಭಿಕ ಆಘಾತದಿಂತ ಪಾರು ಮಾಡಿದ್ದರು.
ಆರ್ಭಟಿಸಿದ ಕುನಾಲ್: ರಾಹುಲ್ ಆಟಕ್ಕೆ ತಕ್ಕ ಬೆಂಬಲ ನೀಡಿದ ಕುನಾಲ್ (ಔಟಾಗದೆ 202, 252ಎಸೆತ, 24 ಬೌಂಡರಿ, 1 ಸಿಕ್ಸರ್) ಎದುರಾಳಿ ತಂಡದ ಬೌಲರ್ಗಳ ಬೆವರಿಳಿಸಿದರು. ಶುಕ್ರವಾರ ಅವರು 58 ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ 109.4 ಓವರ್ಗಳಲ್ಲಿ 3 ವಿಕೆಟ್ಗೆ 488 (ಕೆ.ಎಲ್. ರಾಹುಲ್ 213, ಗಣೇಶ್ ಸತೀಶ್ 21, ಕುನಾಲ್ ಕಪೂರ್ ಔಟಾಗದೆ 202, ಆರ್. ಸಮರ್ಥ್ ಔಟಾಗದೆ 30; ಕುಶಾಂಗ್ ಪಟೇಲ್ 102ಕ್ಕೆ1, ಎಚ್.ಎ. ಪಟೇಲ್ 93ಕ್ಕೆ1).
ಗುಜರಾತ್ 7 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 16. (ಸ್ಮಿತ್ ಪಟೇಲ್ ಬ್ಯಾಟಿಂಗ್ 8, ಸುಮಿತ್ ಗೋಹಾಲಿ ಬ್ಯಾಟಿಂಗ್ 8).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.