ನವದೆಹಲಿ (ಪಿಟಿಐ): ಭಾರತದ ಅಥ್ಲೀಟ್ಗಳಾದ ಸಿನಿಮೋಳ್ ಪೌಲೋಸ್ ಮತ್ತು ಸಜೀಶ್ ಜೋಸೆಫ್ ಅವರ ಲಂಡನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಕನಸು ಭಗ್ನಗೊಂಡಿದೆ. ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ ನಡೆದ ಅಥ್ಲೆಟಿಕ್ ಕೂಟವೊಂದರಲ್ಲಿ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಇಬ್ಬರೂ ವಿಫಲರಾದರು.
ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಇಬ್ಬರಿಗೂ ಇದು ಕೊನೆಯ ಅವಕಾಶವಾಗಿತ್ತು. ಮಹಿಳೆಯರ 1500 ಮೀ. ಓಟದಲ್ಲಿ ಸಿನಿಮೋಳ್ 4:13.91 ಸೆಕೆಂಡ್ಗಳಲ್ಲಿ ಏಳನೆಯವರಾಗಿ ಗುರಿ ತಲುಪಿದರು. ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು 4:08.00 ಸೆಕೆಂಡ್ಗಳಲ್ಲಿ ಗುರಿ ತಲುಪಬೇಕಿತ್ತು.
ಪುರುಷರ 800 ಮೀ. ಓಟದಲ್ಲಿ ಸಜೀಶ್ 1:47.87 ಸೆಕೆಂಡ್ಗಳಲ್ಲಿ ಗುರಿಮುಟ್ಟಿ ಎರಡನೇ ಸ್ಥಾನ ಪಡೆದರು. ಆದರೆ ಒಲಿಂಪಿಕ್ಸ್ ಅರ್ಹತಾ ಮಟ್ಟ (1:46.30 ಸೆ.) ತಲುಪಲು ಅವರಿಗೆ ಸಾಧ್ಯವಾಗಲಿಲ್ಲ. 1:47.69 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಮೇಯ್ನಿ ಅಹ್ಮದ್ ಚಿನ್ನ ಗೆದ್ದರು.
ಮಹಿಳೆಯರ 1500 ಮೀ. ಓಟದಲ್ಲಿ ಕೆನಡಾದ ಹಿಲರಿ ಸ್ಟೆಲ್ಲಿಂಗ್ವೆರ್ಫ್ ಬಂಗಾರ ಜಯಿಸಿದರು. ಅವರು ಸ್ಪರ್ಧೆ ಕೊನೆಗೊಳಿಸಲು 4:09.14 ಸೆಕೆಂಡ್ಗಳನ್ನು ತೆಗೆದುಕೊಂಡರು. ಆಸ್ಟ್ರೇಲಿಯದ ಜೋ ಬಕ್ಮನ್ (4:09.54 ಸೆ.) ಎರಡನೆ ಸ್ಥಾನ ಪಡೆದರು.
ಗಿರೀಶ್ ನಾತು ತಾಂತ್ರಿಕ ಅಧಿಕಾರಿ
ಮುಂಬೈ (ಪಿಟಿಐ): ಪುಣೆಯ ಹಿರಿಯ ಬ್ಯಾಡ್ಮಿಂಟನ್ ಅಂಪೈರ್ ಗಿರೀಶ್ ನಾತು ಅವರು ಲಂಡನ್ ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದಾರೆ.
ನಾತು ಅವರು 2008ರಲ್ಲಿ ನಡೆದಿದ್ದ ಬೀಜಿಂಗ್ ಒಲಿಂಪಿಕ್ಸ್ನಲ್ಲಿಯೂ ತಾಂತ್ರಿಕ ಅಧಿಕಾರಿಯಾಗಿದ್ದರು ಎಂದು ಪುಣೆ ಬ್ಯಾಡ್ಮಿಂಟನ್ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.