ADVERTISEMENT

ಸುರೇಶ್ ಕಲ್ಮಾಡಿ ಕೆಳಗಿಳಿಯಲಿ: ಮಾಜಿ ಅಥ್ಲೀಟ್‌ಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 17:30 IST
Last Updated 21 ಫೆಬ್ರುವರಿ 2011, 17:30 IST

ಮಂಗಳೂರು: ರಾಜಕಾರಣಿಗಳನ್ನು ಕ್ರೀಡಾ ಸಂಸ್ಥೆಗಳಿಂದ ದೂರ ಇಡುವಂತೆ ಒತ್ತಾಯಿಸಿರುವ ‘ಕ್ಲೀನ್ ಸ್ಪೋರ್ಟ್ಸ್ ಇಂಡಿಯ’ ಅಥ್ಲೀಟ್‌ಗಳು, ಈ ವಿಷಯದಲ್ಲಿ ಎಷ್ಟೇ ಪ್ರತಿರೋಧ ಎದುರಾದರೂ ಎದುರಿಸಲು ಸಿದ್ಧ ಎಂದು ಎಚ್ಚರಿಸಿದರು.ಅರ್ಜುನ ಪ್ರಶಸ್ತಿ ಪುರಸ್ಕೃತ ಮಾಜಿ ಅಥ್ಲೀಟ್‌ಗಳಾದ ರೀತ್ ಅಬ್ರಹಾಂ, ವಂದನಾ ರಾವ್, ವಂದನಾ ಶಾನಭಾಗ್ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಮನ್‌ವೆಲ್ತ್ ಕ್ರೀಡೆಗಳ ನಂತರ ರಾಜಕಾರಣಿಗಳ ಬಣ್ಣ ಬಯಲಾಗಿದೆ. ವಿವಾದಕ್ಕೊಳಗಾಗಿರುವ ಸುರೇಶ್ ಕಲ್ಮಾಡಿ ಅವರನ್ನು ಭಾರತ ಒಲಿಂಪಿಕ್ ಅಸೋಷಿಯೇಷನ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಈ ಹಿಂದೆ ರಾಂಚಿಯಲ್ಲಿ ಮನವಿ ಮಾಡಿದ್ದೇವೆ. ‘ಕ್ವಿಟ್ ಕಲ್ಮಾಡಿ’ ಬೇಡಿಕೆಯೇ ನಮ್ಮ ಮುಂದಿನ ಗುರಿ ಎಂದು ರೀತ್ ಹೇಳಿದರು.

‘ಹಲವು ರಾಜಕಾರಣಿಗಳು 20-30 ವರ್ಷಗಳಿಂದ ಕ್ರೀಡಾ ಸಂಘಟನೆಗಳ ಜವಾಬ್ದಾರಿ ವಹಿಸಿದ್ದಾರೆ. ಸೌಕರ್ಯಗಳ ನಿರ್ಮಾಣವಾಗಿದೆ. ಆದರೆ ನಮ್ಮ ಅಥ್ಲೀಟ್‌ಗಳ ಪ್ರದರ್ಶನ ಮಟ್ಟ ನಿರೀಕ್ಷಿತ ರೀತಿ ಇಲ್ಲ. ಕ್ರೀಡಾಪಟುಗಳೇ ಸಂಸ್ಥೆಗಳನ್ನು ನಿರ್ವಹಿಸಬೇಕು’ ಎಂದರು.

ಈಗಿನ ಯುವ ಕ್ರೀಡಾಪಟುಗಳು ನಮ್ಮ ಜತೆ ಸೇರಬೇಕೆಂದು ನಾವು ಹೇಳುತ್ತಿಲ್ಲ. ಇದರಿಂದ ಅವರಿಗೆ ಕಿರುಕುಳ ಕೊಡುವ ಸಾಧ್ಯತೆ ಇರುತ್ತದೆ. ನಮಗೆ ಜನರ ಬೆಂಬಲವೂ ಅಗತ್ಯವಿದೆ ಎಂದರು.

‘ನಾನು ಅಥ್ಲೆಟಿಕ್ಸ್‌ಗೆ ಬರುವಾಗ ಕಲ್ಮಾಡಿ ಕ್ರೀಡಾಕ್ಷೇತ್ರದಲ್ಲಿದ್ದರು. ನಾನು 1988ರಲ್ಲಿ ಅಥ್ಲೆಟಿಕ್ಸ್‌ನಿಂದ ದೂರವಾಗಲು ಅವರು ಷೋಕಾಸ್ ನೋಟಿಸ್ ಕೊಟ್ಟಿದ್ದೇ ಕಾರಣ’ ಎಂದು ವಂದನಾ ರಾವ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.