ADVERTISEMENT

ಹಳಿಯಾಳದಲ್ಲಿ ಇಂದಿನಿಂದ ರಾಷ್ಟ್ರಮಟ್ಟದ ಕುಸ್ತಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:15 IST
Last Updated 18 ಫೆಬ್ರುವರಿ 2011, 18:15 IST

ಹಳಿಯಾಳ : ಇಲ್ಲಿಯ ಕೆಂಪು ಮಣ್ಣಿನ ಅಖಾಡದಲ್ಲಿ ಶನಿವಾರದಿಂದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ದೇಶದ ಖ್ಯಾತಿವೆತ್ತ    ಪೈಲ್ವಾನರು ಲಗ್ಗೆ ಇಟ್ಟಿದ್ದಾರೆ. ಒಟ್ಟಾರೆ ಬಹುಮಾನ ಮೊತ್ತ ರೂ. 10 ಲಕ್ಷವಿದ್ದು, ತುರುಸಿನ ಕುಸ್ತಿಗಳು ನಡೆಯುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ಪಂದ್ಯಾವಳಿಗೆ ರಂಗು ತುಂಬಲು ರಾಷ್ಟ್ರಮಟ್ಟದ ಮಹಿಳಾ ಕುಸ್ತಿಗಳನ್ನೂ ನಡೆಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲಾ ಕುಸ್ತಿ ಸಂಸ್ಥೆ, ಹಳಿಯಾಳದ ವಿ.ಆರ್.ಡಿ.ಎಂ ಟ್ರಸ್ಟ್, ಉತ್ಕರ್ಷ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಜಂಟಿಯಾಗಿ ಈ ಸ್ಪರ್ಧೆಯನ್ನು ಸಂಘಟಿಸಿವೆ.

ದಿ.ವಿಶ್ವನಾಥರಾವ್ ಆರ್. ದೇಶಪಾಂಡೆ ಸ್ಮರಣಾರ್ಥ ನಡೆಯಲಿರುವ ಮಹಾನ್ ಭಾರತ ಕೇಸರಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯು 80 ಕೆ.ಜಿ ಮೇಲ್ಪಟ್ಟವರ ಮುಕ್ತ ಸ್ಪರ್ಧೆಯಾಗಿದೆ.  ಪ್ರಥಮ ಬಹುಮಾನ ರೂ. 1.75 ಲಕ್ಷ, ಬೆಳ್ಳಿ ಗದೆ, ಬಂಗಾರದ ಪದಕ, ದ್ವಿತೀಯ ಬಹುಮಾನ ರೂ.  50 ಸಾವಿರ ನಗದು, ಬೆಳ್ಳಿ ಪದಕ, ತೃತೀಯ ಬಹುಮಾನ ರೂ. 25 ಸಾವಿರ ನಗದು, ಕಂಚಿನ ಪದಕ ಪ್ರದಾನ ಮಾಡಲಾಗುವುದು.

ಕರ್ನಾಟಕ ಕೇಸರಿ ರಾಜ್ಯಮಟ್ಟದ ಸ್ಪರ್ಧೆಯು 80 ಕೆ.ಜಿ. ವಿಭಾಗದಲ್ಲಿ ನಡೆಯಲಿದೆ. ಪ್ರಥಮ ಬಹುಮಾವಾಗಿ ರೂ. 30 ಸಾವಿರ ನೀಡಲಾಗುವುದು. 74 ಕೆ.ಜಿ. ವಿಭಾಗದ ಕರ್ನಾಟಕ ಕೇಸರಿ ಸ್ಪರ್ಧೆಯಲ್ಲಿ ವಿಜೇತರಿಗೆ ರೂ. 10 ಸಾವಿರ ಲಭಿಸಲಿದೆ. ಮಹಿಳೆಯರ ವಿಭಾಗದ  ವೀರರಾಣಿ ಕಿತ್ತೂರ ಚೆನ್ನಮ್ಮ ಭಾರತ ಕೇಸರಿ ಪ್ರಶಸ್ತಿಗೆ ನಡೆಯುವ ಕುಸ್ತಿಯಲ್ಲಿ ವಿಜೇತರಿಗೆ ರೂ. 25 ಸಾವಿರ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.