ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಅಣ್ಣಾಮಲೈ ವಿ.ವಿ. ಹಾಗೂ ಚೆನ್ನೈನ ಡಿ.ಬಿ. ಜೈನ್ ಕಾಲೇಜು ತಂಡದವರು ಜೈನ್ ವಿಶ್ವವಿದ್ಯಾಲಯ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಕ್ರೀಡಾಕೂಟದ ಹಾಕಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್ಎಚ್ಎ) ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅಣ್ಣಾಮಲೈ ವಿ.ವಿ. 5-1ಗೋಲುಗಳಿಂದ ಬೆಂಗಳೂರಿನ ಎಸ್.ಬಿ.ಎಂ. ಜೈನ್ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿದೆ.
ವಿಜಯಿ ತಂಡದ ರಫಿಕ್ ಆರಂಭದ ಮೂರನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ 31 ನಿಮಿಷಗಳ ಅಂತರದಲ್ಲಿ ಇದೇ ಆಟಗಾರ ಮತ್ತೊಂದು ಗೋಲು ಗಳಿಸಿದರು. ಇನ್ನುಳಿದ ಗೋಲುಗಳನ್ನು ರಮೇಶ್ ಕನ್ನಾ ಹಾಗೂ ಮುದ್ದಪ್ಪ ಗಳಿಸಿ ಉತ್ತಮ ಸಾಥ್ ನೀಡಿದರು. ಎಸ್.ಬಿ.ಎಂ. ಜೈನ್ ಕಾಲೇಜಿನ ಏಕೈಕ ಗೋಲನ್ನು ಚರಣ ಚಂಗಪ್ಪ 5 ನೇ ನಿಮಿಷದಲ್ಲಿ ಗಳಿಸಿದರು.
ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಡಿ.ಬಿ. ಜೈನ್ ಕಾಲೇಜು 3-2ಗೋಲುಗಳಿಂದ ಬೆಂಗಳೂರಿನ ಎಸ್ಜೆಸಿಸಿ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಡಿ.ಬಿ. ಕಾಲೇಜಿನ ಆರ್. ಮುತ್ತಣ್ಣ ಪ್ರಭಾವಿ ಪ್ರದರ್ಶನ ನೀಡಿದರೆ, ಎಸ್ಜೆಸಿಸಿಯ ಮೊಹಮ್ಮದ್ ಮುಷ್ತಾಕ್ ಗಮನ ಸೆಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.