ಇಂಚೆನ್: ಐದು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರ ಹಲವು ಸಾಧನೆಗಳಿಗೆ ಈಗ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಏಷ್ಯನ್ ಕ್ರೀಡಾಕೂಟದ ಇತಿಹಾಸದ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟ ಹೆಗ್ಗಳಿಕೆಗೆ ಮಣಿಪುರದ ಬಾಕ್ಸರ್ ಪಾತ್ರರಾಗಿದ್ದಾರೆ.
ಬುಧವಾರ ನಡೆದ 51 ಕೆ.ಜಿ. ಫ್ಲೈವೇಟ್ ವಿಭಾಗದ ಸ್ಪರ್ಧೆಯ ಫೈನಲ್ನಲ್ಲಿ ಮೇರಿ ಕೋಮ್ 2–0ರಲ್ಲಿ ಕಜಕಸ್ತಾನದ ಜಾಯಿನಾ ಶೆಕರ್ಬೆಕೊವಾ ಎದುರು ಗೆಲುವು ಸಾಧಿಸಿದರು. 2010ರಲ್ಲಿ ಚೊಚ್ಚಲ ಏಷ್ಯನ್ ಕೂಟವಾಡಿದ್ದ ಮೇರಿ ಆಗ ಕಂಚು ಗೆದ್ದಿದ್ದರು.
ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಜಯಿಸಿ ಭರವಸೆ ಮೂಡಿಸಿದ್ದ ಮೇರಿ ಇಂಚೆನ್ನಲ್ಲೂ ಸಾಮರ್ಥ್ಯ ಸಾಬೀತು ಮಾಡಿದರು. ಮೊದಲ ಸುತ್ತಿನಿಂದಲೇ ಆಕ್ರಮಣಕಾರಿಯಾದ ಮೇರಿ ಪ್ರಬಲ ಪಂಚ್ ಮತ್ತು ರಕ್ಷಣಾತ್ಮಕ ಆಟದ ಮೂಲಕ ಗಮನ ಸೆಳೆದರು.
ಮೊದಲ ಎರಡು ನಿಮಿಷಗಳ ಅವಧಿಯಲ್ಲಿ ಮೇರಿ ಬ್ಯಾಕ್ ಪೆಡಲ್ ಮೂಲಕ ಪಾಯಿಂಟ್ ಗಳಿಸಿದರು. ಇದರಿಂದ ಒಟ್ಟು 39 ಪಾಯಿಂಟ್ಗಳನ್ನು ಪಡೆದರೆ, ಶೆಕರ್ಬೆಕೊವಾ 37 ಪಾಯಿಂಟ್ ಕಲೆ ಹಾಕಿದರು.
ಎರಡನೇ ಬೌಟ್ನಲ್ಲಿ ಉಭಯ ಆಟಗಾರ್ತಿಯರ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಮೊದಲ ಕಿಕ್ನಲ್ಲಿ ಮೇರಿ ಒಂಬತ್ತು ಪಾಯಿಂಟ್ಸ್ ಪಡೆದರೆ, ಶೆಕರ್ಬೆಕೊವಾ ಹತ್ತು ಪಾಯಿಂಟ್ಸ್ ಬಾಚಿಕೊಂಡರು. ಆದ್ದರಿಂದ ಈ ಸುತ್ತು ಕೊನೆಯವರೆಗೂ ಬಾಕ್ಸಿಂಗ್ ಪ್ರೇಮಿಗಳನ್ನು ಕುತೂಹಲದ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಆದರೆ, ಈ ಸುತ್ತು 38–38ರಲ್ಲಿ ಸಮವಾಗಿತು.
ಮೂರನೇ ಬೌಟ್ನ ಕೊನೆಯಲ್ಲಿ ಮೇರಿ ಮತ್ತೆ ಪ್ರಾಬಲ್ಯ ಮೆರೆದರು. ಈ ಸುತ್ತಿನ ಮೊದಲ ಅವಕಾಶದಲ್ಲಿ 9 ಪಾಯಿಂಟ್ಸ್ ಗಳಿಸಿದರೆ, ನಂತರ ಸತತ ಮೂರು ಬಾರಿ ತಲಾ ಹತ್ತು ಪಾಯಿಂಟ್ಸ್ ಕಲೆ ಹಾಕುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೇರಿ ಒಟ್ಟು 39 ಮತ್ತು ಶೆಕರ್ಬೆಕೊವಾ 37 ಪಾಯಿಂಟ್ಸ್ ಪಡೆದರು. ಮೂರನೇ ಬೌಟ್ನಲ್ಲಿ ಗೆಲುವು ಲಭಿಸುತ್ತಿದ್ದಂತೆಯೇ ಮೇರಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಗೊಗಾಯ್ ಅಭಿನಂದನೆ: ಮೇರಿ ಕೋಮ್ ಅವರ ಸಾಧನೆಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಾಯ್ ಅಭಿನಂದಿಸಿದ್ದಾರೆ. ‘ಮೇರಿ ಚಿನ್ನದ ಪದಕ ಜಯಿಸಿದ್ದು ಅತ್ಯಂತ ಅವಿಸ್ಮರಣೀಯ ಸಂದರ್ಭ. ಏಕೆಂದರೆ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಅವರು. ಅವರ ಸಾಧನೆ ಮುಂದುವರಿಯಲಿ’ ಎಂದು ಅವರು ಹೇಳಿದ್ದಾರೆ.
ಮೇರಿ ಕೋಮ್ ಬಗ್ಗೆ...
ಮಣಿಪುರದ ಇಂಫಾಲದ ಮೇರಿ ಕೋಮ್ 2012ರ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದ ಏಕೈಕ ಬಾಕ್ಸರ್ ಎನಿಸಿದ್ದರು.ಮಹಿಳೆಯರು ಬಲಿಷ್ಠರಾಗಬೇಕೆನ್ನುವ ಕಾರಣಕ್ಕಾಗಿ ‘ಮ್ಯಾಗ್ನಿಫಿಷೆಂಟ್’ ಖ್ಯಾತಿಯ ಮೇರಿ ಇಂಫಾಲದಲ್ಲಿ ಮಹಿಳೆಯರಿಗೋಸ್ಕರ ಕ್ಲಬ್ ಆರಂಭಿಸಿದ್ದಾರೆ. ಹೋದ ವರ್ಷ ಅವರ ಆತ್ಮಕಥೆ ‘ಅನ್ಬ್ರೇಕಬಲ್’ ಪ್ರಕಟವಾಗಿದೆ.
ಮೇರಿ ಮಹಿಳೆಯರ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಐದು ಚಿನ್ನ ಮತ್ತು ಒಂದು ಬೆಳ್ಳಿ ಜಯಿಸಿದ್ದಾರೆ. ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ನಾಲ್ಕು ಚಿನ್ನ ಮತ್ತು ಒಂದು ರಜತ ಗೆದ್ದುಕೊಂಡಿದ್ದಾರೆ.
ಕೋಚ್ ಅಭಿಪ್ರಾಯ
‘ಏಷ್ಯನ್ ಕೂಟಕ್ಕೆ ಅಭ್ಯಾಸ ನಡೆಸಲು ದೆಹಲಿಗೆ ಬರುವಂತೆ ಸಲಹೆ ನೀಡಿದೆ. ಮೊದಲು ಮೇರಿ ಕೋಮ್ ಒಪ್ಪಿಕೊಳ್ಳಲಿಲ್ಲ. ನಂತರ ಮನವೊಲಿಸಿದೆ. ಶಿಬಿರಕ್ಕೆ ಸೇರಿಕೊಂಡ ನಂತರ ಅವರು ಅಭ್ಯಾಸದಲ್ಲಿ ತಲ್ಲೀನರಾದರು. ಯುವ ಬಾಕ್ಸರ್ಗಳ ಜೊತೆ ಕಠಿಣ ಅಭ್ಯಾಸ ನಡೆಸಿದರು. ಮೇರಿ ಅವರ ಅರ್ಪಣಾ ಮನೋಭಾವ ಮೆಚ್ಚುವಂಥದ್ದು. ಆದ್ದರಿಂದಲೇ ಅವರಿಗೆ ಪದಕ ಗೆಲ್ಲಲು ಸಾಧ್ಯವಾಯಿತು’
–ಲೆನಿನ್ ಮೇಟಿ, ಮೇರಿ ಕೋಮ್ ಕೋಚ್
ಸಾಧನೆಯ ಮೂಲಕವೇ ಉತ್ತರ
ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಒಟ್ಟು 17 ಪದಕಗಳನ್ನು ಗೆದ್ದಿರುವ ಮೇರಿ ಕೋಮ್ ಅವರಿಗೆ ಗ್ಲಾಸ್ಗೊದಲ್ಲಿ ಎರಡು ತಿಂಗಳು ಹಿಂದೆ ನಡೆದ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಸ್ಥಾನ ಲಭಿಸಿರಲಿಲ್ಲ!
ಮೂರನೇ ಮಗುವಿಗೆ ಜನ್ಮ ನೀಡಿದ ಬಳಿಕ ಮೇರಿ ಎರಡು ವರ್ಷ ವಿಶ್ರಾಂತಿ ಪಡೆದಿದ್ದರು. ಆದರೆ, ಪದಕ ಗೆಲ್ಲುವ ಆಸೆಯೊಂದಿಗೆ ಅವರು ಕಾಮನ್ವೆಲ್ತ್ ಕೂಟಕ್ಕೆ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಂಡಿದ್ದರು. ಆದರೆ, ಇವರ ಹೆಸರನ್ನು ಕೈ ಬಿಡಲಾಗಿತ್ತು. ಏಷ್ಯನ್ ಕೂಟಕ್ಕೆ ಒಂದು ಸಲ ಆಯ್ಕೆ ಟ್ರಯಲ್ಸ್ ಅನ್ನು ಮುಂದೂಡಿದ್ದರಿಂದ ಮೇರಿ ಬೇಸರಕ್ಕೆ ಒಳಗಾಗಿದ್ದರು. ಈಗ ಬಂಗಾರದ ಸಾಧನೆ ತೋರುವ ಮೂಲಕ ಟೀಕಾಕಾರರಿಗೆ ಸಾಧನೆಯ ಮೂಲಕ ತಿರುಗೇಟು ನೀಡಿದ್ದಾರೆ.
‘ಸೋಲುಗಳೇ ನನ್ನ ಸಾಧನೆಗೆ ಸ್ಫೂರ್ತಿ’
ಇಂಚೆನ್: ‘ಏಷ್ಯನ್ ಕೂಟದಲ್ಲಿ ಚಿನ್ನದ ಪದಕ ಗೆಲ್ಲಬೇಕೆನ್ನುವ ನನ್ನ ಆಸೆ ಈಡೇರಿದ್ದಕ್ಕೆ ಅತೀವ ಸಂತೋಷವಾಗಿದೆ. ನನ್ನ ಮೂರೂ ಮಕ್ಕಳನ್ನು ಬಿಟ್ಟು ಕಠಿಣ ಅಭ್ಯಾಸ ನಡೆಸಿದ್ದಕ್ಕೂ ಉತ್ತಮ ಫಲ ಲಭಿಸಿದೆ. ಕುಟುಂಬದ ಬೆಂಬಲ ಇಲ್ಲದಿದ್ದರೆ ಇಲ್ಲಿ ಪದಕ ಗೆಲ್ಲಲು ಸಾಧ್ಯವೇ ಆಗುತ್ತಿರಲಿಲ್ಲ...’
ಪದಕ ಗೆದ್ದ ನಂತರ ಮೇರಿ ಕೋಮ್ ಅವರು ಹೇಳಿದ ಮಾತಿದು. ಮಣಿಪುರದ ಬಾಕ್ಸರ್ ಮಾಧ್ಯಮದವರ ಜೊತೆ ಮಾತನಾಡಿ ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟಿದ್ದಾರೆ. ಅವರು ಮಾತನಾಡಿದ್ದನ್ನು ಇಲ್ಲಿ ಪ್ರಶ್ನೋತ್ತರ ರೂಪದಲ್ಲಿ ನೀಡಲಾಗಿದೆ.
*ಬಂಗಾರದ ಪದಕ ಗೆದ್ದ ಸಾಧನೆ ಬಗ್ಗೆ ಹೇಳಿ?
ಮೂವರು ಮಕ್ಕಳನ್ನು ಬಿಟ್ಟು ಅಭ್ಯಾಸ ನಡೆಸುವಾಗ ತುಂಬಾ ಕಷ್ಟವೆನಿಸುತ್ತಿತ್ತು. ನಾನು ಗೆಲ್ಲಬೇಕು ಎಂದು ದೇಶದ ಕೋಟ್ಯಂತರ ಅಭಿಮಾನಿಗಳು ಹಾರೈಸಿದ್ದರು. ಅವರ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.
*ಹಿಂದಿನ ಕೂಟದಲ್ಲಿ ಕಂಚು ಲಭಿಸಿತ್ತು. ಇಲ್ಲಿ ಚಿನ್ನ ಗೆದ್ದ ಯಶಸ್ಸಿನ ಗುಟ್ಟು ಏನು?
2010ರಲ್ಲಿ ಕಂಚು ಜಯಿಸಿದ್ದಾಗ ಅದು ನನಗೆ ಮೊದಲ ಏಷ್ಯನ್ ಕೂಟವಾಗಿತ್ತು. ಆದರೂ ನಾನು ಪದಕ ಗೆದ್ದುಕೊಂಡಿದ್ದರಿಂದ ವಿಶ್ವಾಸ ಹೆಚ್ಚಾಗಿತ್ತು. ಆಗಿನಿಂದಲೇ ಬಂಗಾರ ಗೆಲ್ಲಲೇಬೇಕು ಎನ್ನುವ ಆಸೆ ಬಲವಾಗಿತ್ತು. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ.
*ಕಾಮನ್ವೆಲ್ತ್ ಕೂಟಕ್ಕೆ ತಂಡದಲ್ಲಿ ಸ್ಥಾನ ಲಭಿಸದಿದ್ದಾಗ ನಿಮ್ಮ ಮನಸ್ಥಿತಿ ಹೇಗಿತ್ತು?
ಹಿಂದಿನ ಎರಡು ವರ್ಷ ಯಾವ ಕ್ರೀಡಾಕೂಟಗಳಲ್ಲಿಯೂ ಪಾಲ್ಗೊಂಡಿರಲಿಲ್ಲ. ದೇಶಕ್ಕಾಗಿ ಇನ್ನಷ್ಟು ಪದಕಗಳನ್ನು ಗೆಲ್ಲಬೇಕೆಂದು ನನ್ನ ಮನಸ್ಸು ಸದಾ ತುಡಿಯುತ್ತಿತ್ತು. ಆದ್ದರಿಂದ ಕಾಮನ್ವೆಲ್ತ್ ಕೂಟಕ್ಕೆ ಆಯ್ಕೆ ಟ್ರಯಲ್ಸ್ನಲ್ಲಿ ಪಾಲ್ಗೊಂಡಿದ್ದೆ. ಆದರೆ, ಅಲ್ಲಿ ನನ್ನ ಹೆಸರನ್ನು ಕೈಬಿಟ್ಟಿದ್ದರಿಂದ ತುಂಬಾ ಬೇಸರಕ್ಕೆ ಒಳಗಾದೆ. ಆ ನಿರಾಸೆ ಹಾಗೂ ಹಿನ್ನಡೆಯೇ ಇಲ್ಲಿ ಬಂಗಾರ ಪದಕ ಗೆಲ್ಲಲು ಸ್ಫೂರ್ತಿಯಾಯಿತು.
*ಏಷ್ಯನ್ ಕೂಟದಲ್ಲಿ ಪದಕ ಗೆಲ್ಲುವ ಭರವಸೆ ಇತ್ತೇ?
ಲಂಡನ್ ಒಲಿಂಪಿಕ್ಸ್ ನಂತರ ಪಾಲ್ಗೊಂಡ ಮೊದಲ ಅಂತರರಾಷ್ಟ್ರೀಯ ಟೂರ್ನಿ ಇದು. ಇಲ್ಲಿ ಬಂಗಾರ ಗೆಲ್ಲುವುದೇ ನನ್ನ ಗುರಿಯಾಗಿತ್ತು. ಬಾಕ್ಸರ್ ಮತ್ತು ಮೂರು ಮಕ್ಕಳ ತಾಯಿಯಾಗಿ ಜವಾಬ್ದಾರಿ ನಿಭಾಯಿಸುವುದು ತುಂಬಾ ಕಷ್ಟ. ಹಿಂದಿನ ಮೂರು ತಿಂಗಳುಗಳಲ್ಲಿ ಸಾಕಷ್ಟು ಅಭ್ಯಾಸ ನಡೆಸಿದ್ದೇನೆ.
*ಪದಕ ಯಾರಿಗೆ ಅರ್ಪಿಸಲು ಇಷ್ಟಪಡುತ್ತೀರಿ?
ನನ್ನ ಇಷ್ಟೆಲ್ಲಾ ಸಾಧನೆಗೆ ಬೆಂಬಲವಾಗಿ ನಿಂತಿದ್ದು ಭಾರತದ ಜನತೆ. ಅವರಿಗೆ ಈ ಪದಕ ಅರ್ಪಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.