ADVERTISEMENT

13 ವರ್ಷದೊಳಗಿನವರ ಚೆಸ್ ;ಅಗ್ರಸ್ಥಾನ ಹಂಚಿಕೊಂಡ ಇಬ್ಬರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ಮಂಗಳೂರು: ಇಬ್ಬರು ಸ್ಥಳೀಯ ಆಟಗಾರರಾದ- ಅಗ್ರ ಶ್ರೇಯಾಂಕದ ಆರ್.ಯು.ಅನಂತರಾಮು ಮತ್ತು ಐದನೇ ಶ್ರೇಯಾಂಕದ ಅರ್ಜುನ್ ಅಡಪ್ಪ, ರಾಜ್ಯ 13 ವರ್ಷದೊಳಗಿನವರ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್‌ಷಿಪ್‌ನ ಐದನೇ ಸುತ್ತಿನ ನಂತರ ತಲಾ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ನಗರದ ಬಿಜೈನ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಸಂಸ್ಥೆ (ಎಸ್‌ಕೆಡಿಸಿಎ) ಆಶ್ರಯದಲ್ಲಿ  ನಡೆಯುತ್ತಿರುವ ಈ ಟೂರ್ನಿಯಲ್ಲಿ ಪೈಪೋಟಿ ಹೆಚ್ಚುತ್ತಿದೆ. ಭಾನುವಾರದ ಕೊನೆಗೆ ಮಂಗಳೂರಿನ ಇನ್ನೊಬ್ಬ ಆಟಗಾರ- ಎರಡನೇ ಶ್ರೇಯಾಂಕದ ಶರಣ್ ರಾವ್ ಮತ್ತು ಹುಬ್ಬಳ್ಳಿಯ ಆದಿತ್ಯ ಬಿ.ಕಲ್ಯಾಣಿ ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ.

ಆದಿತ್ಯ ಐದನೇ ಸುತ್ತಿನಲ್ಲಿ ಬಿಳಿ ಕಾಯಿಗಳಲ್ಲಿ ಆಡಿ, ಮೈಸೂರಿನ ಯಶಸ್ಕರ ಜೋಯಿಸ್‌ಗೆ ಮಣಿದರೂ ಎರಡನೇ ದಿನದ ಕೊನೆಗೆ ಅವರ ಎರಡನೇ ಸ್ಥಾನ ಅಬಾಧಿತವಾಗಿ ಉಳಿಯಿತು. ಶರಣ್ ರಾವ್ 39 ನಡೆಗಳಲ್ಲಿ ಬೆಂಗಳೂರಿನ ಸ್ವರ್ಣಾಂಗ್ಶು ಘೋಷ್ ಅವರನ್ನು ಮಣಿಸಿದರು.

ಬಿಳಿ ಪಡೆಗಳಲ್ಲಿ ಅರ್ಜುನ ಅಡಪ್ಪ ಅವರು ಎದುರಾಳಿ ಅನಂತರಾಮು ಜತೆ ಪಾಯಿಂಟ್ ಹಂಚಿಕೊಳ್ಳುವುದಕ್ಕೆ ಒಪ್ಪಿಕೊಂಡರು.  ಮಂಗಳೂರಿನ ನಿಖಿಲೇಶ್ ಹೊಳ್ಳ (3.5) ಮತ್ತು ಹುಬ್ಬಳ್ಳಿಯ ಶಾಶ್ವತ್ ಎಸ್.ಮುದೇನಗುಡಿ (3.5) ಕೂಡ ಡ್ರಾ ಮಾಡಿಕೊಂಡರು. ಬೆಂಗಳೂರಿನ ಪ್ರಣವ್ ಎಂ.ಭಟ್ (3), ಹುಬ್ಬಳ್ಳಿಯ ನಾಗಶ್ರವಣ್ ಬಿ.ಹೇಮಾದ್ರಿ (2) ವಿರುದ್ಧ ಗ್ದ್ದೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.