ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 14ರಿಂದ 17ರವರೆಗೆ ನಡೆಯಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ 2300 ಕ್ರೀಡಾಪಟುಗಳು ಭಾಗವಹಿಸುವರು.
ಗುರುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ದಸರಾ ಕ್ರೀಡಾ ಉಪಸಮಿತಿ ಅಧ್ಯಕ್ಷ ಎಂ.ಎ.ಮೋಹನ್, `14ರಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಭಾಗವಹಿಸುವ ಕ್ರೀಡಾಪಟುಗಳು ಕ್ರೀಡಾಜ್ಯೋತಿಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವರು~ ಎಂದು ತಿಳಿಸಿದರು.
`ಅರಮನೆ ಉತ್ತರ ದ್ವಾರದಿಂದ (ಬಲರಾಮ ಗೇಟ್) ನಜರ್ಬಾದ್ನ ಪ್ರಮುಖ ಬಡಾವಣೆಗಳಲ್ಲಿ ಸಾಂಪ್ರದಾಯಿಕ ಮೆರವಣಿಗೆ ಮೂಲಕ ಸುಮಾರು 2000 ಕ್ರೀಡಾಪಟುಗಳು ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಆಗಮಿಸುವರು. ಒಲಿಂಪಿಯನ್ ವಿಕಾಸ್ ಗೌಡ, ಲಂಡನ್ ಪ್ಯಾರಾಲಿಂಪಿಕ್ಸ್ ಬೆಳ್ಳಿಪದಕ ವಿಜೇತ ಹೈಜಂಪ್ಪಟು ಎಚ್.ಎನ್.ಗಿರೀಶ್ ಅವರನ್ನು ಸನ್ಮಾನಿಸಲಾಗುವುದು ಎಂದರು.
21ರಂದು ಹಾಫ್ ಮ್ಯಾರಥಾನ್: `ಅ. 21ರಂದು ಹಾಫ್ ಮ್ಯಾರಥಾನ್ ನಡೆಯಲಿದ್ದು, ಎಲ್ಲ ವಯೋಮಾನದವರು ಭಾಗವಹಿಸಬಹುದು. ವಿಜೇತರಿಗೆ ನಗದು ಬಹುಮಾನ, ಪ್ರಯಾಣ ಭತ್ಯೆ, ದಿನ ಭತ್ಯೆ, ವಸತಿ ಸೌಕರ್ಯ, ಸ್ಥಳೀಯ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು.
ಪ್ರಥಮ ಸ್ಥಾನಕ್ಕೆ 30 ಸಾವಿರ ರೂಪಾಯಿ, ದ್ವಿತೀಯ ಸ್ಥಾನಕ್ಕೆರೂ. 25 ಸಾವಿರ, ತೃತೀಯ ಸ್ಥಾನಕ್ಕೆ ರೂ. 20,500, 4ನೇ ಸ್ಥಾನಕ್ಕೆ ರೂ. 15 ಸಾವಿರ, 5ನೇ ಸ್ಥಾನಕ್ಕೆ ರೂ. 10 ಸಾವಿರ ಹಾಗೂ 6ನೇ ಸ್ಥಾನಕ್ಕೆ ರೂ. 5 ಸಾವಿರ ನಗದು ಬಹುಮಾನ ನೀಡಲಾಗುವುದು~ ಎಂದು ತಿಳಿಸಿದರು.
ಸೈಕಲ್ ರ್ಯಾಲಿ: ಮೈಸೂರಿನಿಂದ ಮಡಿಕೇರಿವರೆಗೆ (256 ಕಿ.ಮೀ) ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, 10 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ನಿಗದಿತ ಸಮಯ, ದಿನಾಂಕವನ್ನು ಇನ್ನೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.