ರಾಜ್ಕೋಟ್ : ಆರಂಭಿಕ ಬ್ಯಾಟ್ಸ್ಮನ್ ಕೇದಾರ್ ದೇವಧರ್ (100; 61ಎ, 11ಬೌಂ, 4ಸಿ) ಅವರ ಮನಮೋಹಕ ಶತಕದ ನೆರವಿನಿಂದ ಬರೋಡ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 36ರನ್ಗಳಿಂದ ಗುಜರಾತ್ ತಂಡವನ್ನು ಸೋಲಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಬರೋಡ 20 ಓವರ್ಗಳಲ್ಲಿ 7 ವಿಕೆಟ್ಗೆ 175ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ಅಕ್ಷರ್ ಪಟೇಲ್ ಸಾರಥ್ಯದ ಗುಜರಾತ್ 18 ಓವರ್ಗಳಲ್ಲಿ 139ರನ್ಗಳಿಗೆ ಹೋರಾಟ ಮುಗಿಸಿತು.
ಬ್ಯಾಟಿಂಗ್ ಆರಂಭಿಸಿದ ಬರೋಡ 25ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ದೀಪಕ್ ಹೂಡಾ ಪಡೆ 100ರ ಗಡಿ ದಾಟುವುದೇ ಕಷ್ಟ ಎನಿಸಿತ್ತು. ಆದರೆ ದೇವಧರ್ ಮತ್ತು ಸ್ವಪ್ನಿಲ್ ಸಿಂಗ್ (44; 28ಎ, 3ಬೌಂ, 2ಸಿ) ಸ್ಫೋಟಕ ಆಟ ಆಡಿ ತಂಡವು ಸವಾಲಿನ ಮೊತ್ತ ಸೇರಿಸಲು ಕಾರಣರಾದರು.
ಗುರಿ ಬೆನ್ನಟ್ಟಿದ ಗುಜರಾತ್ ಕೂಡ ನಿರಂತರವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಚಿರಾಗ್ ಗಾಂಧಿ (52; 41ಎ, 4ಬೌಂ,1ಸಿ) ಮತ್ತು ಅಕ್ಷರ್ ಪಟೇಲ್ (33; 19ಎ, 2ಬೌಂ,2ಸಿ) ಛಲದಿಂದ ಹೋರಾಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಆಗಲಿಲ್ಲ.
ಸಂಕ್ಷಿಪ್ತ ಸ್ಕೋರ್: ಬರೋಡ: 20 ಓವರ್ಗಳಲ್ಲಿ 7 ವಿಕೆಟ್ಗೆ 175 (ಕೇದಾರ್ ದೇವಧರ್ 100, ಉರ್ವಿಲ್ ಪಟೇಲ್ 10, ಸ್ವಪ್ನಿಲ್ ಕೆ.ಸಿಂಗ್ 44; ಈಶ್ವರ್ ಚೌಧರಿ 24ಕ್ಕೆ1, ಪಿಯೂಷ್ ಚಾವ್ಲಾ 45ಕ್ಕೆ3, ಜೆ.ಕೆ.ಪಾರ್ಮರ್ 37ಕ್ಕೆ2, ಎಸ್.ಎಸ್. ಸಿಂಧೆ 34ಕ್ಕೆ1).
ಗುಜರಾತ್: 18 ಓವರ್ಗಳಲ್ಲಿ 139 (ಪ್ರಿಯಾಂಕ್ ಪಾಂಚಾಲ್ 13, ಚಿರಾಗ್ ಜೆ.ಗಾಂಧಿ 52, ಅಕ್ಷರ್ ಪಟೇಲ್ 33, ಕರಣ್ ಪಿ.ಪಟೇಲ್ 16; ಎ.ಸೇಥ್ 15ಕ್ಕೆ2, ಶೋಯಬ್ ತಾಯ್ 18ಕ್ಕೆ2, ಆರ್.ಟಿ.ಅರೋಟೆ 26ಕ್ಕೆ3, ಕೃಣಾಲ್ ಪಾಂಡ್ಯ 23ಕ್ಕೆ2). ಫಲಿತಾಂಶ: ಬರೋಡ ತಂಡಕ್ಕೆ 36ರನ್ ಗೆಲುವು ಹಾಗೂ 4 ಪಾಯಿಂಟ್ಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.