ADVERTISEMENT

ಕರ್ನಾಟಕದ ನೀರಸ ಬ್ಯಾಟಿಂಗ್‌

ಕೂಚ್ ಬೆಹಾರ್‌ ಟ್ರೋಫಿ ಕ್ರಿಕೆಟ್ ಟೂರ್ನಿ: ವಿದರ್ಭ ಉತ್ತಮ ಆರಂಭ

ಪಿಟಿಐ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST

ನಾಗಪುರ: ನಲ್ಕಂಡೆ, ರೋಹಿತ್ ಮತ್ತು ರೇಖಡೆ ಅವರ ದಾಳಿಗೆ ನಲುಗಿದ ಕರ್ನಾಟಕ 19 ವರ್ಷದೊಳಗಿನವರ ತಂಡದವರು ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವಿದರ್ಭ ವಿರುದ್ಧದ ಪಂದ್ಯದಲ್ಲಿ 132 ರನ್‌ಗಳಿಗೆ ಆಲೌಟಾಯಿತು.

ಇಲ್ಲಿ ಗುರುವಾರ ಆರಂಭಗೊಂಡ ನಾಲ್ಕು ದಿನಗಳ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬೇಗನೇ ವಿಕೆಟ್ ಒಪ್ಪಿಸಿದರು.

ಮಧ್ಯಮ ಕ್ರಮಾಂಕದ ಶುಭಾಂಗ್ ಹೆಗಡೆ ಮತ್ತು ಸುಜಯ್‌ ಸಾತೇರಿ ತಲಾ 27 ಮತ್ತು 25 ರನ್‌ ಗಳಿಸಿ ಮೊತ್ತವನ್ನು 100ರ ಗಡಿ ದಾಟಿಸಿದರು.

ADVERTISEMENT

ನಂತರ ತಂಡ ಮತ್ತೊಮ್ಮೆ ಬ್ಯಾಟಿಂಗ್ ಕುಸಿತ ಕಂಡಿತು. ಪ್ರಮುಖ ಆಟಗಾರರು ವಿಕೆಟ್‌ ನೀಡಲು ಅವಸರಿಸಿದರುಙ! ಹೀಗಾಗಿ 68.5 ಓವರ್‌ಗಳಲ್ಲಿ ಮೊದಲ ಇನಿಂಗ್ಸ್‌ಗೆ ತೆರೆ ಬಿದ್ದಿತು.

ವಿದರ್ಭ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ಕಳೆದುಕೊಳ್ಳದೆ 64 ರನ್‌ ಗಳಿಸಿದೆ. ಅಥರ್ವ ಥಾಯ್ಡೆ ಮತ್ತು ಎ.ಎಂ.ಕುಮಾರ್‌ ತಲಾ 27 ಮತ್ತು 33 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಹೀಗಾಗಿ ಎದುರಾಳಿಗಳನ್ನು ಬೇಗನೆ ಕಟ್ಟಿಹಾಕುವ ಜವಾಬ್ದಾರಿ ಬೌಲರ್‌ಗಳ ಮೇಲಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ, ಮೊದಲ ಇನಿಂಗ್ಸ್‌: 68.5 ಓವರ್‌ಗಳಲ್ಲಿ 132 (ಶುಭಾಂಗ್ ಹೆಗಡೆ 27, ಸುಜಯ್‌ ಸಾತೇರಿ 25; ಡಿ.ಜಿ.ನಲ್ಕಂಡೆ 54ಕ್ಕೆ3, ಪಿ.ಆರ್‌.ರೇಖಡೆ 28ಕ್ಕೆ3, ರೋಹಿತ್ ದತ್ತಾತ್ರೇಯ 16ಕ್ಕೆ3); ವಿದರ್ಭ: 19 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 64 (ಅಥರ್ವ 27, ಕುಮಾರ್‌ 33).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.