ADVERTISEMENT

‘ಉದ್ಯೋಗದ ನಿರೀಕ್ಷೆಯಲ್ಲಿ ಅಂಧ ಕ್ರಿಕೆಟಿಗರು’

ಭರವಸೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಕಾಶ್ ಜಯರಾಮಯ್ಯ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ವಿಶ್ವಕಪ್‌ ಟ್ರೋಫಿಯೊಂದಿಗೆ ಅಂಧ ಕ್ರಿಕೆಟಿಗರಾದ ಸುನಿಲ್‌ (ಎಡ), ಪ್ರಕಾಶ್‌, ಬಸಪ್ಪ
ವಿಶ್ವಕಪ್‌ ಟ್ರೋಫಿಯೊಂದಿಗೆ ಅಂಧ ಕ್ರಿಕೆಟಿಗರಾದ ಸುನಿಲ್‌ (ಎಡ), ಪ್ರಕಾಶ್‌, ಬಸಪ್ಪ   

ಬೆಂಗಳೂರು: ‘ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತ ಅಂಧರ ತಂಡ ಒಟ್ಟು ಐದು ಬಾರಿ ವಿಶ್ವಕಪ್ ಗೆದ್ದಿದೆ. ತಂಡದ ಆಟಗಾರರು ಮಾತ್ರ ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ಕರ್ನಾಟಕದ ಆಟಗಾರರಿಗೆ ರಾಜ್ಯ ಸರ್ಕಾರ ನೀಡಿದ ಉದ್ಯೋಗದ ಭರವಸೆ ಇನ್ನೂ ಈಡೇರಲಿಲ್ಲ’ ಎಂದು ಅಂಧರ ಕ್ರಿಕೆಟ್ ತಂಡದ ಕರ್ನಾಟಕದ ಬ್ಯಾಟ್ಸ್‌ಮನ್ ಪ್ರಕಾಶ್ ಜಯರಾಮಯ್ಯ ಬೇಸರ ವ್ಯಕ್ತಪಡಿಸಿದರು.

‘ಕಳೆದ ವರ್ಷ ಭಾರತ ತಂಡ ವಿಶ್ವಕಪ್‌ ಗೆದ್ದ ಸಂದರ್ಭದಲ್ಲಿ ರಾಜ್ಯದ ಆಟಗಾರರಿಗೆ ತಲಾ ₹ 10 ಲಕ್ಷ ನೀಡಲು ಸರ್ಕಾರ ಮುಂದಾಗಿತ್ತು. ನಂತರ ನಿರ್ಧಾರ ಬದಲಿಸಿ ₹ 7 ಲಕ್ಷ ನಗದು ಮತ್ತು ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಆಟಗಾರರಿಗೆ ಈ ಮೊತ್ತ ಸಿಕ್ಕಿದೆ. ಉದ್ಯೋಗದ ಭರವಸೆ ಇಂದಿಗೂ ಹುಸಿಯಾಗಿದೆ. ಹೀಗಾಗಿ ಭವಿಷ್ಯದ ಬಗ್ಗೆ ಚಿಂತೆ ಕಾಡಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಬಿಸಿಸಿಐ ಸದ್ಯದಲ್ಲೇ ಅಂಧ ಕ್ರಿಕೆಟಿಗರನ್ನು ಗುರುತಿಸುವ ನಿರೀಕ್ಷೆ ಇದೆ. ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಈ ಕುರಿತು ಸಂದೇಶ ಕಳಿಸಿದ್ದಾರೆ. ಕ್ರೀಡಾ ಸಚಿವಾಲಯ ಮತ್ತು ರಾಜ್ಯ ಸರ್ಕಾರ ಕೂಡ ಆಟಗಾರರ ನೆರವಿಗೆ ಬರುವ ಭರವಸೆ ಇದೆ’ ಎಂದು ವಿಶ್ವ ಅಂಧರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಜಿ.ಕೆ ಮಹಾಂತೇಶ್ ತಿಳಿಸಿದರು. ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ, ವಿಶ್ವಕಪ್‌ನಲ್ಲಿ ಆಡಿದ್ದ ಬಸಪ್ಪ ಹಾಗೂ ಸುನಿಲ್ ರಮೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.