ಮುಂಬೈ: ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜೀವನ ಕುರಿತ ಚಲನಚಿತ್ರವನ್ನು ಅಭಿಷೇಕ್ ಚೌಬೆ ನಿರ್ದೇಶಿಸಲಿದ್ದಾರೆ.
’ಧ್ಯಾನಚಂದ್‘ ಹೆಸರಿನ ಈ ಚಿತ್ರವನ್ನು ರಾನಿ ಸ್ಕ್ರೂವಾಲಾ ಅವರ ಆರ್ಎಸ್ವಿಪಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ಬ್ಲೂ ಮಂಕಿ ಫೀಲ್ಮ್್ಸ ಕೂಡ ಸಹಭಾಗಿಯಾಗಿದೆ.
’ಧ್ಯಾನಚಂದ್ ಅವರು ವಿಶ್ವದ ಸರ್ವಶ್ರೇಷ್ಠ ಹಾಕಿಪಟುಗಳಲ್ಲಿ ಒಬ್ಬರು. ಅವರ ಕುರಿತಾದ ಚಿತ್ರವನ್ನು ನಿರ್ದೇಶಿಸುತ್ತಿರುವುದು ನನ್ನ ಸೌಭಾಗ್ಯ. ಅವರ ಜೀವನದ ಕುರಿತ ವಿಷಯಗಳನ್ನು ಬಹಳಷ್ಟು ಸಂಶೋಧನೆ ಮಾಡಿರುವ ನಿರ್ಮಾಪಕರು ಚಿತ್ರಕಥೆಯನ್ನು ಸಿದ್ಧಗೊಳಿಸಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ನಾಯಕ ಮತ್ತು ತಾರಾಬಳಗವನ್ನು ನಿರ್ಧರಿಸಲಾಗುವುದು‘ ಎಂದು ಚೌಬೆ ಹೇಳಿದ್ದಾರೆ.
’ರಂಗ್ ದೇ ಬಸಂತಿ‘, ’ಸ್ವದೇಸ್‘ ಮತ್ತು ’ಉರಿ; ದ ಸರ್ಜಿಕಲ್ ಸ್ಟ್ರೈಕ್‘ ನಂತಹ ಹಿಟ್ ಚಿತ್ರಗಳನ್ನು ಸ್ಕ್ರೂವಾಲಾ ಅವರ ಸಂಸ್ಥೆಯು ನಿರ್ಮಿಸಿತ್ತು.
’ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಧ್ಯಾನಚಂದ್ ಅವರಂತಹ ಮತ್ತೊಬ್ಬ ಹಾಕಿ ಆಟಗಾರನಿಲ್ಲ. ಬ್ಲ್ಯೂ ಮಂಕಿ ಸಂಸ್ಥೆಯ ಕ್ರಿಯೆಟಿವ್ ನಿರ್ಮಾಪಕ ರೋಹಿತ್ ವೇದ್ ಅವರು ಧ್ಯಾನಚಂದ್ ಅವರ ಕುರಿತು ಸಿನಿಮಾ ನಿರ್ಮಾಣದ ಕುರಿತು ಪ್ರಸ್ತಾಪಿಸಿದ್ದರು. ಬಹಳ ಪುಳಕಗೊಂಡಿದ್ದೆ. ನನ್ನ ತಂದೆಯ ಸ್ಪೂರ್ತಿದಾಯಕ ಜೀವನಗಾಥೆಯನ್ನು ಬೆಳ್ಳಿತೆರೆಯ ಮೇಲೆ ನೋಡಲು ಉತ್ಸುಕನಾಗಿದ್ದೇನೆ‘ ಎಂದು ಒಲಿಂಪಿಯನ್ ಹಾಕಿಪಟು ಅಶೋಕಕುಮಾರ್ ಧ್ಯಾನಚಂದ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.