ನವದೆಹಲಿ: ಅಕ್ಟೋಬರ್ 5ರಿಂದ ಆರಂಭವಾಗುವ 50 ಓವರ್ಗಳ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಮಾರ್ಗಸೂಚಿ ಕುರಿತಂತೆ ಚರ್ಚಿಸಲು ಬಿಸಿಸಿಐನ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಲು ವೆಸ್ಟ್ ಇಂಡೀಸ್ಗೆ ತೆರಳಲು ಸಿದ್ಧರಾಗಿದ್ದಾರೆ.
ಭಾರತವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 15ರಂದು ಅಹಮದಾಬಾದ್ನಲ್ಲಿ ಪಾಕಿಸ್ತಾನ ವಿರುದ್ಧ ಸೆಣೆಸಲಿದೆ.
‘ಸಲೀಲ್ ಅಂಕೋಲಾ ಪ್ರಸ್ತುತ ವೆಸ್ಟ್ ಇಂಡೀಸ್ನಲ್ಲಿದ್ದಾರೆ. ಆದರೆ, ಟೆಸ್ಟ್ ಸರಣಿ ಮುಗಿದ ನಂತರ ಅವರು ಹಿಂತಿರುಗುತ್ತಾರೆ. ಸೀಮಿತ ಓವರ್ಗಳ ಸರಣಿ ಆರಂಭಕ್ಕೂ ಮೊದಲು ಅಜಿತ್ ತಂಡವನ್ನು ಸೇರಿಕೊಳ್ಳಲಿದ್ದಾರೆ’ ಎಂದು ತಿಳಿದಿರುವ ಬಿಸಿಸಿಐ ಮೂಲವು ತಿಳಿಸಿದೆ.
ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಗರ್ಕರ್ ಅವರಿಗೆ ತಂಡದ ಆಡಳಿತ ಮಂಡಳಿಯನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. 50 ಓವರ್ಗಳ ವಿಶ್ವಕಪ್ಗೆ ಭಾರತದ ರಣತಂತ್ರ ರೂಪಿಸಲು ಈ ಭೇಟಿ ಅವಕಾಶ ಕಲ್ಪಿಸಲಿದೆ.
ತಂಡದ ನಿರ್ವಹಣೆ ಮತ್ತು ಫಿಟ್ನೆಸ್ ಸಮಸ್ಯೆಗಳು ಹಾಗೂ ಕೆಲಸದ ಹೊರೆ ನಿರ್ವಹಣೆಯನ್ನು ನಿರ್ವಹಿಸಿಕೊಂಡು ವಿಶ್ವಕಪ್ಗಾಗಿ 20 ಆಟಗಾರರನ್ನು ಆಯ್ಕೆ ಸಮಿತಿ ಸಜ್ಜುಗೊಳಿಸಬೇಕಿದೆ.
ಆಯ್ಕೆ ಸಮಿತಿ ಅಧ್ಯಕ್ಷರು ಮತ್ತು ತಂಡದ ಮಂಡಳಿಯು ಸಹ ಪರಿವರ್ತನಾ ಯೋಜನೆಯ ಬಗ್ಗೆ ಚರ್ಚಿಸಲಿದೆ. ವೇಗಿ ಜಸ್ಪ್ರೀತ್ ಬೂಮ್ರಾ ಅವರ ಫಿಟ್ನೆಸ್ ಸ್ಥಿತಿ ಮತ್ತು ಮೂರು ಪಂದ್ಯಗಳ ಟಿ 20 ಸರಣಿಗಾಗಿ ಅವರು ಐರ್ಲೆಂಡ್ಗೆ ಹೋಗಲು ಸಾಧ್ಯವಾಗುತ್ತದೆಯೇ ಎಂಬುದರ ಕುರಿತು ವಿಸ್ತೃತ ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.