ADVERTISEMENT

ಹಿಂದುವಾಗಿದ್ದ ಕನೇರಿಯಾ ಪಾಕ್‌ ತಂಡದಲ್ಲಿ ಕಡೆಗಣನೆ: ಶೋಯಬ್ ಅಖ್ತರ್

ಪಿಟಿಐ
Published 27 ಡಿಸೆಂಬರ್ 2019, 4:32 IST
Last Updated 27 ಡಿಸೆಂಬರ್ 2019, 4:32 IST
ಶೋಯಬ್ ಅಖ್ತರ್ ಹಾಗೂ ದನೀಶ್ ಕನೇರಿಯಾ
ಶೋಯಬ್ ಅಖ್ತರ್ ಹಾಗೂ ದನೀಶ್ ಕನೇರಿಯಾ    

ಕರಾಚಿ: ಪಾಕಿಸ್ತಾನ ತಂಡದಲ್ಲಿ ದನೀಶ್ ಕನೇರಿಯಾ ಅವರು ಹಿಂದೂ ಧರ್ಮದವರು ಎಂಬ ಕಾರಣಕ್ಕೆ ಉಳಿದ ಆಟಗಾರರಿಂದ ಅವಗಣನೆಗೆ ಒಳಗಾಗಿದ್ದರು. ಈ ಧೋರಣೆಯನ್ನು ವಿರೋಧಿಸಿ ಕೆಲವರೊಂದಿಗೆ ತಾವು ಜಗಳ ಮಾಡಿದ್ದಾಗಿ ಹಿರಿಯ ಬೌಲರ್ ಶೋಯಬ್ ಅಖ್ತರ್ ಹೇಳಿದ್ದಾರೆ.

ಪಿ ಟಿವಿ ವಾಹಿನಿಯ ‘ಗೇಮ್ ಆನ್‌ ಹೈ’ ಕಾರ್ಯಕ್ರಮದಲ್ಲಿ ಶೋಯಬ್ ಈ ವಿಷಯವನ್ನು ಬಹಿರಂಗಪಡಿಸಿದ್ಧಾರೆ.

‘ನಾನು ಆಡುವ ಸಂದರ್ಭದಲ್ಲಿ ತಂಡದಲ್ಲಿ ಪ್ರಾದೇಶಿಕತೆ ಮತ್ತು ಧರ್ಮದ ಬಗ್ಗೆ ಮಾತನಾಡಿದ ಇಬ್ಬರು, ಮೂವರೊಂದಿಗೆ ಜಗಳ ಮಾಡಿದ್ದೆ. ಕರಾಚಿ, ಪಂಜಾಬ್ ಅಥವಾ ಪೇಶಾವರ್ ಗಳಿಂದ ಬಂದವರನ್ನು ಕೀಳಾಗಿ ಕಾಣಲಾಗುತ್ತಿತ್ತು. ಹಿಂದು ಅಗಿರಲೀ. ಯಾರೇ ಆಗಿರಲಿ ಉತ್ತಮವಾಗಿ ಆಡಿ ತಂಡಕ್ಕೆ ಕಾಣಿಕೆ ನೀಡುವುದು ಮುಖ್ಯ. ಕನೇರಿಯಾ ಉತ್ತಮವಾಗಿ ಆಡುತ್ತಿದ್ದರು’ ಎಂದು ವೇಗಿ ಶೋಯಬ್ ಹೇಳಿದರು. ‌

ADVERTISEMENT

‘ಕನೇರಿಯಾ ಅವರೊಂದಿಗೆ ಊಟ ಮಾಡಲು ಮತ್ತು ಆಹಾರ ಹಂಚಿಕೊಳ್ಳಲೂ ಕೂಡ ಹಿಂಜರಿಯುತ್ತಿದ್ದರು. ಈ ಸ್ಥಳದಿಂದ ಅವರೇಕೆ ಆಹಾರ ತೆಗೆದುಕೊಂಡು ಹೋಗುತ್ತಿದ್ದಾರೆಂದು ಉಳಿದವರು ಪ್ರಶ್ನಿಸುತ್ತಿದ್ದರು. ಆದರೆ ಅದೇ ಹಿಂದು ಧರ್ಮೀಯದ ಕನೇರಿಯಾ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಪಾಕಿಸ್ತಾನದ ಗೆಲುವಿಗೆ ಕಾರಣರಾಗಿದ್ದರು. ಇಂಗ್ಲೆಂಡ್‌ನ ಪ್ರಮುಖ ವಿಕೆಟ್‌ಗಳನ್ನು ಕಿತ್ತು ವಿಜೃಂಭಿಸಿದ್ದರು. ಅದರ ಶ್ರೇಯವನ್ನು ಅವರಿಗೆ ನೀಡಲು ಕೂಡ ಕೆಲವರಿಗೆ ಮನಸ್ಸಿರಲಿಲ್ಲ’ ಎಂದು 44 ವರ್ಷದ ಶೋಯಬ್ ವಿಷಾದಿಸಿದರು.

ಲೆಗ್‌ಸ್ಪಿನ್ನರ್ ದನೀಶ್ ಪರಬ್ ಶಂಕರ್ ಕನೇರಿಯಾ, 2009ರಲ್ಲಿ ಡುರಾಮ್‌ನಲ್ಲಿ ನಡೆದಿದ್ದ ಟೂರ್ನಿಯೊಂದರಲ್ಲಿ ಎಸ್ಸೆಕ್ಸ್ ತಂಡದಲ್ಲಿ ಆಡುವಾಗ ಸ್ಪಾಟ್ ಫಿಕ್ಸಿಂಗ್ ಮಾಡಿದ್ದ ಆರೋಪ ಸಾಬೀತಾಗಿತ್ತು. ಕನೇರಿಯಾ ಕೂಡ ಆಗ ತಪ್ಪೊಪ್ಪಿಕೊಂಡಿದ್ದರು. ಅವರು ಪಾಕ್‌ ತಂಡದಲ್ಲಿ 61 ಟೆಸ್ಟ್‌ ಆಡಿ 261 ವಿಕೆಟ್‌ ಗಳಿಸಿದ್ದರು. 18 ಏಕದಿನ ಪಂದ್ಯಗಳಿಂದ 15 ವಿಕೆಟ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.