ನವದೆಹಲಿ: ದಾಖಲೆಗಳ ರಚನೆಯಲ್ಲಿ ಮಹೇಂದ್ರಸಿಂಗ್ ಧೋನಿ ಅತ್ಯುತ್ತಮ ನಾಯಕ. ಅವರು ದೇಶದ ಕ್ರಿಕೆಟ್ಗೆ ನೀಡಿದ ಕಾಣಿಕೆಗಳು ಅಮೂಲ್ಯವಾದವು. ಆದರೆ ಅನಿಲ್ ಕುಂಬ್ಳೆ ಅವರು ಶ್ರೇಷ್ಠ ನಾಯಕ ಎಂದು ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 12ನೇ ವಾರ್ಷಿಕೋತ್ಸವದಂಗವಾಗಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಧೋನಿ ಹಲವು ಮಹತ್ವದ ವಿಜಯಗಳೊಂದಿಗೆ ಭಾರತಕ್ಕೆ ನೀಡಿರುವ ಕಾಣಿಕೆ ಬಹುದೊಡ್ಡದು. ಸೌರವ್ ಗಂಗೂಲಿ ಕೂಡ ಅಂತಹದೇ ಸಾಧನೆಗಳನ್ನು ಮಾಡಿದ್ದಾರೆ. ಆದರೆ, ಕುಂಬ್ಳೆ ಅವರು ಹೆಚ್ಚು ಅವಧಿಗೆ ತಂಡದ ನಾಯಕರಾಗಬೇಕಿತ್ತು. ನಾನು ಅವರ ನಾಯಕತ್ವದಲ್ಲಿ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಆ ಅನುಭವದಲ್ಲಿ ಹೇಳುವುದಾದರೆ, ಕುಂಬ್ಳೆಗೆ ಇನ್ನೂ ಹೆಚ್ಚು ಕಾಲ ನಾಯಕತ್ವದ ಅವಕಾಶ ಸಿಕ್ಕಿದ್ದರೆ ಅವರೂ ಬಹಳ ದಾಖಲೆಗಳನ್ನು ಪೇರಿಸುತ್ತಿದ್ದರು’ ಎಂದು ಗಂಭೀರ್ ಹೇಳಿದ್ದಾರೆ.
2007ರಲ್ಲಿ ರಾಹುಲ್ ದ್ರಾವಿಡ್ ಅವರ ನಂತರ ಅನಿಲ್ ಕುಂಬ್ಳೆ ಭಾರತ ತಂಡಕ್ಕೆ ಆಗಿದ್ದರು. 14 ಟೆಸ್ಟ್ ಗಳಲ್ಲಿ ಅವರು ನಾಯಕತ್ವ ವಹಿಸಿದ್ದರು. ಅದರಲ್ಲಿ ತಂಡವು ಮೂರು ಜಯ, ಐದು ಡ್ರಾ ಮತ್ತು ಆರರಲ್ಲಿ ಸೋತಿತ್ತು. ನವೆಂಬರ್ 2008ರಲ್ಲಿ ಕುಂಬ್ಳೆ ನಿವೃತ್ತಿಯಾದ ನಂತರ ಧೋನಿ ನಾಯಕತ್ವ ವಹಿಸಿಕೊಂಡಿದ್ದರು.
‘ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ ನಾಯಕ. ಅವರು ನಾಲ್ಕು ಟ್ರೋಫಿ ಗೆದ್ದು ಯಶಸ್ವಿ ನಾಯಕನೆ ಎನಿಸಿಕೊಂಡಿದ್ದಾರೆ. ಆ ಸಂಖ್ಯೆಯನ್ನು 6 ರಿಂದ 7ಕ್ಕೇರಿಸುವ ಸಾಮರ್ಥ್ಯವೂ ಅವರಿಗೆ ಇದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.