ADVERTISEMENT

ಭಾರತ–ವಿಂಡೀಸ್ ಸರಣಿ; ಸ್ಥಳಗಳ ಬದಲಾವಣೆಗೆ ಬಿಸಿಸಿಐ ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 13:30 IST
Last Updated 9 ಜನವರಿ 2022, 13:30 IST
-
-   

ನವದೆಹಲಿ (ಪಿಟಿಐ): ಭಾರತದ ಆತಿಥ್ಯದಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿಯ ಪಂದ್ಯಗಳು ಆಯೋಜನೆಗೊಳ್ಳಲಿರುವ ತಾಣಗಳನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.

ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಕುರಿತು ಚಿಂತನೆ ನಡೆಸುತ್ತಿದೆ. ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಸರಣಿಯು ಫೆಬ್ರುವರಿ 6ರಿಂದ ಅಹಮದಾಬಾದ್‌ನಲ್ಲಿ ಆರಂಭವಾಗಲಿದೆ. ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಜೈಪುರ (ಫೆ 9), ಕೋಲ್ಕತ್ತ (ಫೆ 12), ಕಟಕ್ (ಫೆ 15), ವಿಶಾಖಪಟ್ಟಣಂ (ಫೆ 18) ಮತ್ತು ತಿರುವನಂತಪುರದಲ್ಲಿ (ಫೆ 20) ಪಂದ್ಯಗಳನ್ನು ನಿಗದಿಪಡಿಸಲಾಗಿದೆ.

ಆದರೆ ಈಗ ದೇಶದ ಕೆಲವು ನಗರಗಳಲ್ಲಿ ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ, ಕೋವಿಡ್ ತಡೆಗೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಆದ್ದರಿಂದ ಪಂದ್ಯಗಳ ಆಯೋಜನೆಗೆ ಕೋವಿಡ್ ಪ್ರಕರಣಗಳು ಕಡಿಮೆ ಇರುವ ನಗರಗಳನ್ನು ಆಯ್ಕೆ ಮಾಡಲು ಬಿಸಿಸಿಐ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಫೆ.1 ರಂದು ವಿಂಡೀಸ್ ತಂಡವು ಅಹಮದಾಬಾದಿಗೆ ಬರಲಿದೆ. ಮೂರು ದಿನಗಳವರೆಗೆ ಕಡ್ಡಾಯ ಕ್ವಾರಂಟೈನ್‌ನಲ್ಲಿರಲಿದೆ.

ಇದೇ ತಿಂಗಳು ನಡೆಯಬೇಕಿದ್ದ ರಣಜಿ ಟ್ರೋಫಿ, ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಗಳನ್ನು ಬಿಸಿಸಿಐ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.