ADVERTISEMENT

ಎಲ್ಲ ವಯೋಮಾನದ ಕ್ರಿಕೆಟಿಗರಿಗೆ ಪರಿಹಾರ ನೀಡಲು ಆಗ್ರಹ

ಬಿಸಿಸಿಐ ಕಾರ್ಯನಿರ್ವಹಣಾ ಗುಂಪಿನ ಸದಸ್ಯರ ಅಭಿಪ್ರಾಯ

ಪಿಟಿಐ
Published 11 ಜುಲೈ 2021, 14:53 IST
Last Updated 11 ಜುಲೈ 2021, 14:53 IST
ಬಿಸಿಸಿಐ ಲೋಗೊ
ಬಿಸಿಸಿಐ ಲೋಗೊ   

ನವದೆಹಲಿ: ಕಳೆದ ಋತುವಿನಲ್ಲಿ ಪಂದ್ಯಗಳು ನಡೆಯದ ಕಾರಣ ಆದಾಯ ನಷ್ಟ ಅನುಭವಿಸಿರುವ ಎಲ್ಲ ವಯೋಮಾನದ ಕ್ರಿಕೆಟಿಗರಿಗೆ ಪರಿಹಾರ ನೀಡಬೇಕು ಎಂದು ಬಿಸಿಸಿಐ ಕಾರ್ಯನಿರ್ವಹಣಾ ಗುಂಪಿನ ಸದಸ್ಯರಾಗಿರುವ ಜಯದೇವ್ ಶಾ ಮತ್ತು ಯುದ್ಧವೀರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ದೇಶಿ ಕ್ರಿಕೆಟ್‌ಗೆ ಸಂಬಂಧಿಸಿ ಬಿಸಿಸಿಐ ಕಾರ್ಯನಿರ್ವಹಣಾ ಗುಂಪನ್ನು ಭಾನುವಾರ ರಚಿಸಲಾಗಿದೆ.

‘ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಚರ್ಚಿಸಿ ಆಟಗಾರರಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬೇಕು ಮತ್ತು ಸಂಭಾವನೆಯ ಮೊತ್ತ ಎಷ್ಟು ಎಂಬುದರ ಕುರಿತು ಕಾರ್ಯನಿರ್ವಹಣಾ ಗುಂಪು ನಿರ್ಧರಿಸಲಿದೆ‘ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಜಯದೇವ್ ಶಾ ತಿಳಿಸಿದರು.

ADVERTISEMENT

ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌, ಕರ್ನಾಟಕದ ಸಂತೋಷ್ ಮೆನನ್‌, ಅಸ್ಸಾಂನ ದೇವಜೀತ್ ಸೈಕಿಯಾ, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಭಿಷೇಕ್ ದಾಲ್ಮಿಯಾ ಮತ್ತು ದೆಹಲಿಯ ರೋಹನ್ ಜೇಟ್ಲಿ ಬಿಸಿಸಿಐ ಕಾರ್ಯನಿರ್ವಹಣಾ ಗುಂಪಿನ ಇನ್ನುಳಿದ ಸದಸ್ಯರಾಗಿದ್ದಾರೆ.

‘ಕ್ರಿಕೆಟಿಗರಿಗೆ ಪರಿಹಾರ ಮೊತ್ತ ನಿರ್ಧರಿಸುವುದು ನಮ್ಮ ಗುಂಪಿನ ಕಾರ್ಯಗಳಲ್ಲಿ ಒಂದು. ದೇಶಿ ಟೂರ್ನಿಗಳನ್ನು ಆಯೋಜಿಸುವ ಕುರಿತೂ ನಾವು ಮಂಡಳಿಗೆ ಸಲಹೆಗಳನ್ನು ನೀಡುತ್ತೇವೆ. ಅಂತಿಮ ನಿರ್ಧಾರವನ್ನು ಬಿಸಿಸಿಐ ತೆಗೆದುಕೊಳ್ಳಲಿದೆ‘ ಎಂದು ಯುದ್ಧವೀರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.