ADVERTISEMENT

ಐಪಿಎಲ್ ಹಣೆಬರಹ ಕೇಂದ್ರ ಸರ್ಕಾರದ ಕೈಯಲ್ಲಿ

ಈ ವರ್ಷ ಟೂರ್ನಿ ಆಯೋಜನೆಯ ಕುರಿತು ಬಿಸಿಸಿಐ ನಿರ್ಧರಿಸಲ್ಲ: ರಿಜಿಜು

ರಾಯಿಟರ್ಸ್
Published 24 ಮೇ 2020, 20:00 IST
Last Updated 24 ಮೇ 2020, 20:00 IST
ಕಿರಣ್ ರಿಜಿಜು
ಕಿರಣ್ ರಿಜಿಜು   

ಮುಂಬೈ: ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್( ಕ್ರಿಕೆಟ್ ಟೂರ್ನಿಯ ಆಯೋಜನೆಯ ಕುರಿತ ನಿರ್ಧಾರವನ್ನು ಭಾರತ ಸರ್ಕಾರವು ತೆಗೆದುಕೊಳ್ಳುತ್ತದೆ. ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

’ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ನಿಯಂತ್ರಣ ಪ್ರಮಾಣದ ಮೇಲೆ ದೇಶದಲ್ಲಿ ಐಪಿಎಲ್‌ ನಡೆಸುವುದೋ, ಬೇಡವೋ ಎಂಬುದನ್ನು ಸರ್ಕಾರ ತೀರ್ಮಾನಿಸಲಿದೆ. ಜನರ ಮತ್ತು ಆಟಗಾರರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ‘ ಎಂದು ಇಂಡಿಯಾ ಟುಡೆ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

’ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲದಿದ್ದರೆ ಮಾತ್ರ ಐಪಿಎಲ್ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ, ಕ್ರೀಡಾಕೂಟಗಳು ನಡೆಯಬೇಕೆಂದು ನಾವು ಬಯಸಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಜನರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲು ಸಾಧ್ಯವಿಲ್ಲ. ನಮ್ಮ ಸಂಪೂರ್ಣ ಗಮನ ಕೋವಿಡ್‌-19 ವಿರುದ್ಧದ ಹೋರಾಟದ ಮೇಲಿದೆ' ಎಂದು ರಿಜಿಜು ತಿಳಿಸಿದ್ದಾರೆ.

ADVERTISEMENT

ಟೂರ್ನಿಯು ಸಂಪೂರ್ಣ ರದ್ದಾದರೆ ಬಿಸಿಸಿಐಗೆ ನಾಲ್ಕು ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟದ ಆತಂಕವಿದೆ. ಆ ಕಾರಣ, ತೀವ್ರ ಒತ್ತಡದಲ್ಲಿರುವ ಬಿಸಿಸಿಐ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಐಪಿಎಲ್‌ ನಡೆಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಹೇಳಿತ್ತು.

ಅಕ್ಟೋಬರ್‌ನಲ್ಲ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯು ರದ್ದಾದರೆ ಐಪಿಎಲ್‌ ನಡೆಸಲು ಅವಕಾಶ ಸಿಗಬಹುದು ಎಂದು ಹೇಳಲಾಗಿದೆ.

ಶನಿವಾರ ಮಾರ್ದಸೂಚಿ ಬಿಡುಗಡೆ ಮಾಡಿರುವ ಐಸಿಸಿಯು, :ತಮ್ಮ ತಮ್ಮ ದೇಶದಲ್ಲಿ ಕೊರೊನಾ ಸೋಂಕಿನ ಪರಿಣಾಮ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಕ್ರಿಕೆಟ್ ಚಟುವಟಿಕೆಯ ಆರಂಭದ ಕುರಿತು ನಿರ್ದಾರ ಕೈಗೊಳ್ಳಬೇಕು‘ ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.