ADVERTISEMENT

ಕ್ರಿಕೆಟ್‌: ಚಾಂಪಿಯನ್ಸ್‌, ಬಿಡಿಕೆ ಜಯದ ಆರಂಭ

63 ಎಸೆತಗಳಲ್ಲಿ ಶತಕ ಗಳಿಸಿದ ಮಣಿಕಂಠ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 16:15 IST
Last Updated 1 ನವೆಂಬರ್ 2020, 16:15 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಪಂದ್ಯ ಶ್ರೇಷ್ಠ ಗೌರವ ಪಡೆದ ಬಿಡಿಕೆ ಕೋಲ್ಟ್ಸ್‌ ತಂಡದ ಎಸ್‌. ಮಣಿಕಂಠ ಮತ್ತು ಬಿ. ಭುವನ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕ್ರಿಕೆಟ್‌ ಟೂರ್ನಿಯಲ್ಲಿ ಪಂದ್ಯ ಶ್ರೇಷ್ಠ ಗೌರವ ಪಡೆದ ಬಿಡಿಕೆ ಕೋಲ್ಟ್ಸ್‌ ತಂಡದ ಎಸ್‌. ಮಣಿಕಂಠ ಮತ್ತು ಬಿ. ಭುವನ   

ಹುಬ್ಬಳ್ಳಿ: ಚಾಂಪಿಯನ್ಸ್‌ ನೆಟ್‌ ಮತ್ತು ಬಿಡಿಕೆ ಕೋಲ್ಟ್ಸ್‌ ತಂಡಗಳು, ‘ಲೀಲಾವತಿ ಪ್ಯಾಲೇಸ್‌ ಕಪ್‌’ಗಾಗಿ ಆಯೋಜನೆಯಾಗಿರುವ 14 ವರ್ಷದ ಒಳಗಿನವರ ಅಂತರ ಕ್ಯಾಂಪ್‌ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿವೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಬಳಿಕ ಕ್ರಿಕೆಟ್‌ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಇದು ತೆರವಾದ ಬಳಿಕ ಜಿಲ್ಲೆಯಲ್ಲಿ ಆಯೋಜನೆಯಾದ ಮೊದಲ ಸ್ಪರ್ಧಾತ್ಮಕ ಟೂರ್ನಿ ಇದಾಗಿದೆ. ಚಾಂಪಿಯನ್ಸ್‌ ನೆಟ್‌ ಕ್ರಿಕೆಟ್‌ ತರಬೇತಿ ಅಕಾಡೆಮಿ ಟೂರ್ನಿ ಆಯೋಜಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಚಾಂಪಿಯನ್ಸ್ ತಂಡ 30 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 142 ರನ್‌ ಕಲೆಹಾಕಿತು. ಮುಸ್ತಫೀಜ್‌ (39), ಪಿ. ಆಶೀಶ್‌ (ಔಟಾಗದೆ 27) ಮತ್ತು ಬಿ. ರಮೇಶ (24) ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು. ಎದುರಾಳಿ ದುರ್ಗಾ ಸ್ಪೋರ್ಟ್‌ ಅಕಾಡೆಮಿ ತಂಡ 26 ಓವರ್‌ಗಳಲ್ಲಿ 87 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿದ್ದರಿಂದ ಚಾಂಪಿಯನ್ಸ್‌ಗೆ 55 ರನ್‌ಗಳ ಗೆಲುವು ಲಭಿಸಿತು.

ADVERTISEMENT

ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಿಡಿಕೆ ಕೋಲ್ಟ್ಸ್‌ 30 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 209 ರನ್‌ ಗಳಿಸಿತು. ಎಸ್‌. ಮಣಿಕಂಠ (100), ಬಿ. ಭುವನ (43) ತಂಡ ಸವಾಲಿನ ಮೊತ್ತ ಗಳಿಸಲು ಕಾರಣರಾದರು. ಎದುರಾಳಿ ಹುಬ್ಬಳ್ಳಿ ಕೋಲ್ಟ್ಸ್‌ ತಂಡ 22.1 ಓವರ್‌ಗಳಲ್ಲಿ 86 ರನ್‌ ಗಳಿಸಲಷ್ಟೇ ಶಕ್ತವಾಯಿತು. ಶತಕ ಗಳಿಸಿದ ಮಣಿಕಂಠ ಮತ್ತು ಆಲ್‌ರೌಂಡ್‌ ಪ್ರದರ್ಶನ ನೀಡಿದ ಭುವನ (4–2–14–3) ಜಂಟಿಯಾಗಿ ಪಂದ್ಯ ಶ್ರೇಷ್ಠ ಗೌರವ ಪಡೆದರು.

ಉದ್ಘಾಟನೆ: ಕೆಎಸ್‌ಸಿಎ ಧಾರವಾಡ ವಲಯದ ಮಾಜಿ ನಿಮಂತ್ರಕ ಬಾಬಾ ಭೂಸದ ಟೂರ್ನಿಗೆ ಚಾಲನೆ ನೀಡಿದರು. ಪಂಜುರ್ಲಿ ಹೋಟೆಲ್‌ ಸಮೂಹಗಳ ಮಾಲೀಕ ರಾಜೇಂದ್ರ ಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜು ಹಾವೇರಿ, ಡಾ. ಲಿಂಗರಾಜ ಬಿಳೆಕಲ್‌, ಸಂದೇಶ ಬೈಲಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.