ಮೆಲ್ಬರ್ನ್: ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಸರಣಿ ಆಡಲು ತೆರಳಲು ಸಾಧ್ಯವಾಗದಿದ್ದರೆ ಆಗುವ ನಷ್ಟ ಭರಿಸುವ ಸಲುವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸಂಸ್ಥೆಯು ₹ 380 ಕೋಟಿ ಸಾಲ ಪಡೆದಿದೆ.
ಕೊರೊನಾ ವೈರಸ್ ಸೋಂಕು ತಡೆಗಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವಿಶ್ವದೆಲ್ಲೆಡೆ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಯು ನಷ್ಟದ ಹಾದಿಯಲ್ಲಿದೆ. ತನ್ನ ಆಟಗಾರರ ಮತ್ತು ಸಿಬ್ಬಂದಿಯ ವೇತನ ಕಡಿತಕ್ಕೂ ಮುಂದಾಗಿದೆ. ಅಕ್ಟೋಬರ್ನಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನೂ ಆಸ್ಟ್ರೇಲಿಯಾ ಆಯೋಜಿಸುತ್ತಿದೆ. ಆದರೆ ಈಗ ಅದೂ ಅನಿಶ್ಚಿತವಾಗಿದೆ.
ಭಾರತದ ಎದುರು ಡಿಸೆಂಬರ್ನಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಒಂದೊಮ್ಮೆ ಆ ಟೂರ್ನಿ ನಡೆದರೆ ಹೆಚ್ಚು ಆದಾಯ ಲಭಿಸುವ ನಿರೀಕ್ಷೆ ಇದೆ. ಆದರೆ, ಕೊರೊನಾ ವೈರಸ್ ಉಪಟಳವು ಹತೋಟಿಗೆ ಬರದಿದ್ದರೆ, ಈ ವರ್ಷದ ಎಲ್ಲ ಪ್ರಮುಖ ಟೂರ್ನಿಗಳನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಸಾಧ್ಯತೆಗಳು ಹೆಚ್ಚಿವೆ ಇದರಿಂದಾಗಿ ಹಾಗೊಮ್ಮೆ ನಷ್ಟವುಂಟಾದರೆ ತತ್ಕ್ಷಣಕ್ಕೆ ಭರಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಕಾಮನ್ವೆಲ್ತ್ ಬ್ಯಾಂಕ್ನಿಂದ ಈ ಸಾಲವನ್ನು ಪಡೆಯಲಾಗಿದೆ ಎಂದು ‘ದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.