ಬೆಂಗಳೂರು: ಬಂಗಾಳದ ಹುಲಿ ಸೌರವ್ ಗಂಗೂಲಿ ತಮ್ಮ ಕ್ರಿಕೆಟ್ ಬದುಕಿನ ಸಾಧನೆಗಳಿಗಾಗಿ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ. ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾದ ಬಳಿಕ ಬುಧವಾರ ಬೆಂಗಳೂರಿಗೆ ಆಗಮಿಸಿದ ಅವರನ್ನು ಅಭಿಮಾನಿಗಳು ಮುತ್ತಿಕೊಂಡರು ಮತ್ತು ಅವರೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದರು.
ಅಂತೆಯೇ ಅಭಿಮಾನಿಗಳನ್ನು ನಿರಾಸೆಗೊಳಿಸದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತೆಗೆದ ಸೆಲ್ಫೀ ಈಗ ಸಾಕಷ್ಟು ವೈರಲ್ ಆಗಿದೆ. ಜನರ ಪ್ರೀತಿ ಅತ್ಯಂತ ಆಪ್ಯಾಯಮಾನ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.
ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್ ಬಳಿ ಭಾರತೀಯ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಈ ಆಲ್ರೌಂಡರ್ ಕ್ರಿಕೆಟಿಗನನ್ನು ನೋಡಲು ನೆರೆದಿದ್ದ ಅಭಿಮಾನಿಗಳಿಗೆ ನಿರಾಸೆ ಮಾಡಿಲ್ಲ. ಅಲ್ಲೇ ಇದ್ದ ಸಿಆರ್ಪಿಎಫ್ ಜವಾನರು ಕೂಡ, 'ದಾದಾ' ಗಂಗೂಲಿಯನ್ನು ನೋಡಿ ಖುಷಿಯಾಗಿದ್ದರು.
47ರ ಗಂಗೂಲಿ ಅವರು ಬೆಂಗಳೂರಿಗೆ ಬಂದಿದ್ದು ಭಾರತೀಯ ಕ್ರಿಕೆಟಿನ ಗೋಡೆ ಎಂದೇ ಖ್ಯಾತರಾಗಿದ್ದ, ತಮ್ಮ ಮಾಜಿ ಒಡನಾಡಿ ರಾಹುಲ್ ದ್ರಾವಿಡ್ ಅವರೊಂದಿಗೆ ಮಾತನಾಡಲು. ದ್ರಾವಿಡ್ ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಮುಖ್ಯಸ್ಥರಾಗಿದ್ದಾರೆ. ಗಂಗೂಲಿ ಮಾಡಿರುವ ಈ ಟ್ವೀಟನ್ನು 85 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ, ಸುಮಾರು 5 ಸಾವಿರದಷ್ಟು ಮಂದಿ ರೀಟ್ವೀಟ್ ಮಾಡಿದ್ದಾರೆ ಹಾಗೂ 1200ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿ, ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.