ಮುಂಬೈ: ಐಪಿಎಲ್ 2022 ಟೂರ್ನಿ ಆರಂಭಕ್ಕೂ ಮುನ್ನ ಆಲ್ರೌಂಡರ್ ರವೀಂದ್ರ ಜಡೇಜ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ನೇಮಕ ಮಾಡಿರುವುದು ತಪ್ಪಾದ ನಿರ್ಧಾರ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಟೂರ್ನಿ ಆರಂಭಕ್ಕೂ ಎರಡು ದಿನಗಳ ಮೊದಲು ಮಹೇಂದ್ರ ಸಿಂಗ್ ಧೋನಿ ಅವರು ರವೀಂದ್ರ ಜಡೇಜಗೆ ನಾಯಕತ್ವ ಹಸ್ತಾಂತರಿಸಿದ್ದರು. ಆದರೆ ಚೆನ್ನೈ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಟೂರ್ನಿ ಮಧ್ಯದಲ್ಲೇ ಮತ್ತೆ ಧೋನಿಗೆ ಜಡೇಜ ನಾಯಕ ಪಟ್ಟ ಹಸ್ತಾಂತರಿಸಿದ್ದರು.
'ಕ್ರಿಕ್ಬಜ್' ಕಾರ್ಯಕ್ರಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಸೆಹ್ವಾಗ್, 'ಟೂರ್ನಿ ಆರಂಭದಲ್ಲಿ ಧೋನಿ ನಾಯಕರಾಗುವುದಿಲ್ಲ, ರವೀಂದ್ರ ಜಡೇಜ ನೂತನ ನಾಯಕ' ಎಂದು ಘೋಷಿಸಿರುವುದು ಚೆನ್ನೈ ಮಾಡಿದ ಮೊದಲ ತಪ್ಪು ಎಂದು ಹೇಳಿದ್ದಾರೆ.
'ಬ್ಯಾಟರ್ಗಳ ವೈಫಲ್ಯದಿಂದ ಸಿಎಸ್ಕೆ ಹಿನ್ನೆಡೆ ಅನುಭವಿಸಿದೆ. ಆರಂಭದಲ್ಲಿ ಋತುರಾಜ್ ಗಾಯಕವಾಡ್ ರನ್ ಗಳಿಸಲಿಲ್ಲ. ತಂಡವು ಸ್ಥಿರವಾದ ಹನ್ನೊಂದರ ಬಳಗವನ್ನು ಹೊಂದಿರಲಿಲ್ಲ. ಹಾಗೊಂದು ವೇಳೆ ಟೂರ್ನಿ ಆರಂಭದಿಂದಲೇ ಧೋನಿ ನಾಯಕರಾಗುತ್ತಿದ್ದರೆ ಕಥೆಯೇ ವಿಭಿನ್ನವಾಗಿರುತ್ತಿತ್ತು. ಅಲ್ಲದೆ ಚೆನ್ನೈ ತಂಡವು ಇಷ್ಟೊಂದು ಪಂದ್ಯಗಳಲ್ಲಿ ಸೋಲು ಅನುಭವಿಸುತ್ತಿರಲಿಲ್ಲ' ಎಂದು ಹೇಳಿದರು.
ಈವರೆಗೆ 10 ಪಂದ್ಯಗಳಲ್ಲಿ ಏಳರಲ್ಲಿ ಸೋಲು ಅನುಭವಿಸಿರುವ ಚೆನ್ನೈ, ಆರು ಅಂಕ ಮಾತ್ರ ಕಲೆ ಹಾಕಿದ್ದು, ಟೂರ್ನಿಯಿಂದಲೇ ನಿರ್ಗಮನದ ಭೀತಿ ಎದುರಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.