ಕೊಲಂಬೊ: ನಾಯಕ ಯಶ್ ಧುಲ್ ಗಳಿಸಿದ ಅಜೇಯ ಶತಕ (108) ಮತ್ತು ಹರ್ಷಿತ್ ರಾಣಾ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡ, ಎಸಿಸಿ ಎಮರ್ಜಿಂಗ್ ಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಯುಎಇ ‘ಎ’ ತಂಡವನ್ನು 8 ವಿಕೆಟ್ಗಳಿಂದ ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ ‘ಎ’ ತಂಡ, ಹರ್ಷಿತ್ (41ಕ್ಕೆ 4) ಅವರ ಶಿಸ್ತಿನ ದಾಳಿಗೆ ಪರದಾಡಿ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 175 ರನ್ ಪೇರಿಸಿತು. ನಿತೀಶ್ ಕುಮಾರ್ ರೆಡ್ಡಿ (32ಕ್ಕೆ 2) ಮತ್ತು ಮಾನವ್ ಸುತಾರ್ (28ಕ್ಕೆ 2) ಅವರು ಹರ್ಷಿತ್ಗೆ ತಕ್ಕ ಸಾಥ್ ನೀಡಿದರು.
ಭಾರತ ತಂಡ ಕೇವಲ 26.3 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 179 ರನ್ ಗಳಿಸಿ ಗೆದ್ದಿತು.
ಸುಲಭ ಗುರಿ ಬೆನ್ನಟ್ಟಿದ ಭಾರತ, ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್ (8) ಮತ್ತು ಅಭಿಷೇಕ್ ಶರ್ಮಾ (19) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಧುಲ್ ಮತ್ತು ಕರ್ನಾಟಕದ ಬ್ಯಾಟರ್ ನಿಕಿನ್ ಜೋಸ್ (ಅಜೇಯ 41) ಅವರು ಮುರಿಯದ ಮೂರನೇ ವಿಕೆಟ್ಗೆ 138 ರನ್ ಸೇರಿಸಿ ತಂಡವನ್ನು ಜಯದತ್ತ ಮುನ್ನಡೆಸಿದರು.
ಆಕ್ರಮಣಕಾರಿ ಆಟವಾಡಿದ ಯಶ್, 84 ಎಸೆತಗಳನ್ನು ಎದುರಿಸಿ 20 ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. 53 ಎಸೆತಗಳನ್ನು ಎದುರಿಸಿದ ನಿಕಿನ್ ಐದು ಬೌಂಡರಿ ಹೊಡೆದರು.
ಭಾರತ ತನ್ನ ಮುಂದಿನ ಪಂದ್ಯಗಳಲ್ಲಿ ಜುಲೈ 17 ರಂದು ನೇಪಾಳ ವಿರುದ್ಧವೂ, ಜುಲೈ 21 ರಂದು ಪಾಕಿಸ್ತಾನ ‘ಎ’ ವಿರುದ್ಧವೂ ಹಣಾಹಣಿ ನಡೆಸಲಿದೆ.
ಸಂಕ್ಷಿಪ್ತ ಸ್ಕೋರ್: ಯುಎಇ ‘ಎ’ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 175 (ಆರ್ಯಾಂಶ್ ಶರ್ಮಾ 38, ಅಶ್ವಥ್ ವಿ. 46, ಮೊಹಮ್ಮದ್ ಫರಾಜುದ್ದೀನ್ 35, ಹರ್ಷಿತ್ ರಾಣಾ 41ಕ್ಕೆ 4)
ಭಾರತ ‘ಎ’: 26.3 ಓವರ್ಗಳಲ್ಲಿ 2 ವಿಕೆಟ್ಗಳಿಗೆ 179 (ನಿಕಿನ್ ಜೋಸ್ ಔಟಾಗದೆ 41, ಯಶ್ ಧುಲ್ ಔಟಾಗದೆ 108, ಅಲಿ ನಸೀರ್ 14ಕ್ಕೆ 1) ಫಲಿತಾಂಶ: ಭಾರತ ‘ಎ’ ತಂಡಕ್ಕೆ 8 ವಿಕೆಟ್ ಗೆಲುವು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.