ADVERTISEMENT

ದುಲೀಪ್‌ ಟ್ರೋಫಿ: ರೆಡ್‌ ತಂಡಕ್ಕೆ ಆಸರೆಯಾದ ಮಹಿಪಾಲ್‌ ಶತಕ

10 ರನ್‌ಗಳಿಂದ ಶತಕ ತಪ್ಪಿಸಿಕೊಂಡ ಕರುಣ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 19:30 IST
Last Updated 31 ಆಗಸ್ಟ್ 2019, 19:30 IST
ಮಹಿಪಾಲ್‌ ಶತಕ ಸಂಭ್ರಮ–ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ ಆರ್‌.
ಮಹಿಪಾಲ್‌ ಶತಕ ಸಂಭ್ರಮ–ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ ಆರ್‌.   

ಬೆಂಗಳೂರು: ಎಡಗೈ ಬ್ಯಾಟ್ಸ್‌ಮನ್‌ ಮಹಿಪಾಲ್‌ ಲೊಮ್ರೊರ್‌ ಅವರ ತಾಳ್ಮೆಯ ಶತಕ ಬಾರಿಸಿ ಇಂಡಿಯಾ ರೆಡ್‌ ತಂಡದ ಹೋರಾಟಕ್ಕೆ ನೆರವಾದರು. ದುಲೀಪ್‌ ಟ್ರೋಫಿ ಲೀಗ್‌ ಪಂದ್ಯದಲ್ಲಿ ಇಂಡಿಯಾ ಗ್ರೀನ್‌ ತಂಡದ 440 ರನ್‌ಗಳಿಗೆ ಉತ್ತರವಾಗಿ ರೆಡ್‌ ತಂಡ 9 ವಿಕೆಟ್‌ಗೆ 404 ರನ್‌ಗಳೊಡನೆ ಮೂರನದೇ ದಿನದಾಟ ಪೂರೈಸಿದೆ.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಹಿಪಾಲ್‌ ಶನಿವಾರ 126 ರನ್‌ (272 ಎಸೆತ) ಬಾರಿಸಿದರು. 19 ವರ್ಷದ ಈ ಆಟಗಾರನ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌, 14 ಬೌಂಡರಿಗಳಿದ್ದವು. ಶುಕ್ರವಾರ 77 ರನ್‌ ಗಳಿಸಿ ಅಜೇಯರಾಗುಳಿದಿದ್ದ ಕರುಣ್‌ ನಾಯರ್‌ 90 ರನ್ನಿಗೆ ನಿರ್ಗಮಿಸಿ ಶತಕ ವಂಚಿತರಾದರು.

ರೆಡ್‌ ತಂಡ ಇನಿಂಗ್ಸ್‌ ಮುನ್ನಡೆ ಪಡೆಯಬೇಕಾದರೆ ಉಳಿದಿರುವ ಒಂದು ವಿಕೆಟ್‌ನಿಂದ ಇನ್ನೂ 36 ರನ್‌ ಗಳಿಸಬೇಕಾಗಿದೆ. ಆವೇಶ್‌ ಖಾನ್‌ 34 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರೊಡನೆ ಸಂದೀಪ್‌ ವಾರಿಯರ್‌ ಕೊನೆಯ ದಿನವಾದ ಭಾನುವಾರ ಆಟ ಮುಂದುವರಿಸಲಿದ್ದಾರೆ.

ADVERTISEMENT

2 ವಿಕೆಟ್‌ಗೆ 140 ರನ್‌ಗಳೊಡನೆ ಶನಿವಾರ ಆಟ ಮುಂದುವರಿಸಿದ ರೆಡ್‌ ತಂಡ, ಕರುಣ್‌ ಅವರನ್ನು ಬೇಗ ಕಳೆದುಕೊಂಡಿತು. ಶುಕ್ರವಾರ 77 ರನ್‌ ಗಳಿಸಿದ್ದ ಅವರು ಶತಕಕ್ಕೆ 10 ರನ್‌ ಬೇಕಿದ್ದಾಗ ಅಂಕಿತ್‌ ರಜಪೂತ್‌ ಬೌಲಿಂಗ್‌ನಲ್ಲಿ ಆಚೆ ಹೋಗುತ್ತಿದ್ದ ಚೆಂಡನ್ನು ವಿಕೆಟ್‌ಗೆ ಆಡಿದರು. ಮೊದಲ ಪಂದ್ಯದಲ್ಲೂ ಅವರು ಒಮ್ಮೆ ಶತಕದ ಅಂಚಿನಲ್ಲಿದ್ದಾಗ ವಿಕೆಟ್‌ ಕಳೆದುಕೊಂಡಿದ್ದರು.

ಎರಡನೇ ದಿನ 3 ರನ್‌ ಗಳಿಸಿದ್ದಾಗ ಗಾಯಾಳಾಗಿದ್ದ ಅಭಿಮನ್ಯು ಈಶ್ವರನ್‌ (22) ನಂತರ ಮಹಿಪಾಲ್‌ ಜೊತೆಗೂಡಿ ತಂಡದ ಮೊತ್ತವನ್ನು 200 ದಾಟಿಸಿದರು. ಅವರು ಲೆಗ್‌ ಸ್ಪಿನ್ನರ್‌ ರಾಹುಲ್‌ ಚಾಹರ್‌ ಬೌಲಿಂಗ್‌ನಲ್ಲಿ ಸಬ್‌ಸ್ಟಿಟ್ಯೂಟ್‌ ಆಕ್ಷದೀಪ್‌ಗೆ ಕ್ಯಾಚಿತ್ತರು. ಮಹಿಪಾಲ್‌ ಮತ್ತು ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್‌ ಐದನೇ ವಿಕೆಟ್‌ಗೆ ಉಪಯುಕ್ತ 65 ರನ್‌ಗಳ ಜೊತೆಯಾಟವಾಡಿದರು.

ಎರಡನೇ ದಿನದಾಟದಲ್ಲಿ ನಾಯರ್‌ ಅವರಿಗೇ ಹೆಚ್ಚಿನ ಆಟವಾಡಲು ಬಿಟ್ಟಿದ್ದ ಮಹಿಪಾಲ್‌ ಶನಿವಾರ ಶತಕದ ಹಾದಿಯಲ್ಲಿ ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿದರು. ರೆಡ್‌ ತಂಡ ಮುನ್ನಡೆ ಗಳಿಸಲು 77 ರನ್‌ ಬಾಕಿಯಿದ್ದಾಗ, ರಾಜಸ್ಥಾನದ ಈ ಆಟಗಾರ, ಎಡಗೈ ಸ್ಪಿನ್ನರ್‌ ಧರ್ಮೇಂದ್ರಸಿನ್ಹ ಜಡೇಜ ಅವರ ಬೌಲಿಂಗ್‌ನಲ್ಲಿ ಸಬ್‌ಸ್ಟಿಟ್ಯೂಟ್‌ ಅಕ್ಷದೀಪ್‌ಗೆ ಎರಡನೇ ಕ್ಯಾಚಿತ್ತರು. ಜಡೇಜ 125 ರನ್ನಿಗೆ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಸ್ಕೋರುಗಳು: ಇಂಡಿಯಾ ಗ್ರೀನ್‌: 1ನೇ ಇನಿಂಗ್ಸ್‌: 440; ಇಂಡಿಯಾ ರೆಡ್‌: 1ನೇ ಇನಿಂಗ್ಸ್‌: 135 ಓವರುಗಳಲ್ಲಿ 9 ವಿಕೆಟ್‌ಗೆ 404 (ಕರುಣ್‌ ನಾಯರ್‌ 90, ಮಹಿಪಾಲ್‌ ಲೊಮ್ರೊರ್‌ 126, ಕೆ.ಎಸ್‌.ಭರತ್‌ 38, ಆವೇಶ್‌ ಖಾನ್‌ ಬ್ಯಾಟಿಂಗ್‌ 34; ಧರ್ಮೇಂದ್ರ ಸಿಂಗ್‌ ಜಡೇಜ 125ಕ್ಕೆ4, ಅಂಕಿತ್ ರಜಪೂತ್‌ 67ಕ್ಕೆ2, ತನ್ವೀರ್‌ ಉಲ್‌ ಹಕ್ 19ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.