ADVERTISEMENT

ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ರೋಹಿತ್ ಅಲಭ್ಯ: ತಂಡಕ್ಕೆ ಪ್ರಿಯಾಂಕ್

ಪಿಟಿಐ
Published 13 ಡಿಸೆಂಬರ್ 2021, 16:04 IST
Last Updated 13 ಡಿಸೆಂಬರ್ 2021, 16:04 IST
ರೋಹಿತ್ ಶರ್ಮಾ –ಎಎಫ್‌ಪಿ ಚಿತ್ರ
ರೋಹಿತ್ ಶರ್ಮಾ –ಎಎಫ್‌ಪಿ ಚಿತ್ರ   

ಮುಂಬೈ: ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗೆ ಅಲಭ್ಯರಾಗಲಿದ್ದಾರೆ. ಅವರ ಬದಲಿಗೆ ಬಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್‌ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಮುಂಬೈಯಲ್ಲಿ ತಂಡವು ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಅವರಲ್ಲಿ ನೋವು ಉಲ್ಬಣಿಸಿತ್ತು. ಅವರ ಕೈಗೆ ಪೆಟ್ಟು ಕೂಡ ಬಿದ್ದಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಬಿಸಿಸಿಐ ತಿಳಿಸಿದೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಉಪನಾಯಕ ಯಾರು ಆಗಲಿದ್ದಾರೆ ಎಂದು ಸ್ಪಷ್ಟಪಡಿಸಿಲ್ಲ.

ಕೆ.ಎಲ್‌.ರಾಹುಲ್ ಉಪನಾಯಕನಾಗುವುದು ಖಚಿತ ಎನ್ನಲಾಗಿದೆ. ರಿಷಭ್ ಪಂತ್‌ ಅಥವಾ ರವಿಚಂದ್ರನ್ ಅಶ್ವಿನ್ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆ ಇದೆ. ಅಜಿಂಕ್ಯ ರಹಾನೆ ಅವರನ್ನು ಈಗಾಗಲೇ ಆ ಸ್ಥಾನದಿಂದ ತೆರವುಗೊಳಿಸಲಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಜನವರಿ 15ರಂದು ಕೊನೆಗೊಳ್ಳಲಿದ್ದು 19ರಿಂದ ಏಕದಿನ ಸರಣಿ ನಡೆಯಲಿದೆ.

ADVERTISEMENT

ಕೊಹ್ಲಿ ನಾಯಕತ್ವ ಖುಷಿ ನೀಡಿದೆ: ರೋಹಿತ್‌

ಐದು ವರ್ಷ ಭಾರತ ಏಕದಿನ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಅವರ ನಾಯಕತ್ವದ ಅವಧಿಯನ್ನು ಎಲ್ಲರೂ ಖುಷಿಯಿಂದ ಕಳೆದಿದ್ದಾರೆ ಎಂದು ಹೊಸ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಬಿಸಿಸಿಐ ಡಾಟ್ ಟಿವಿ ಜೊತೆ ಮಾತನಾಡಿದ ಅವರು ಕೊಹ್ಲಿ ಅವಧಿ ತಂಡದ ಪಾಲಿಗೆ ಅತ್ಯುತ್ತಮವಾಗಿತ್ತು ಎಂದಿದ್ದಾರೆ. ಯುಎಇಯಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ನಂತರ ಟ್ವೆಂಟಿ20 ನಾಯಕತ್ವವನ್ನು ವಿರಾಟ್ ಕೊಹ್ಲಿ ತೊರೆದಿದ್ದರು. ಈಗ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.