ADVERTISEMENT

ಮಹಾರಾಜ ಟ್ರೋಫಿ: ಟೈಗರ್ಸ್‌ಗೆ ಮಣಿದ ಲಯನ್ಸ್

ಮಹಾರಾಜ ಟ್ರೋಫಿ: ಶ್ರೀಜಿತ್‌–ಅಭಿನವ್‌ ಶತಕದ ಜೊತೆಯಾಟ

ಆರ್.ಜಿತೇಂದ್ರ
Published 25 ಆಗಸ್ಟ್ 2025, 18:53 IST
Last Updated 25 ಆಗಸ್ಟ್ 2025, 18:53 IST
ಹುಬ್ಬಳ್ಳಿ ಟೈಗರ್ಸ್ ತಂಡದ ಅಭಿನವ್‌ ಮನೋಹರ್ ಹಾಗೂ ಕೆ.ಎಲ್. ಶ್ರೀಜಿತ್‌ ಜೋಡಿ  – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.
ಹುಬ್ಬಳ್ಳಿ ಟೈಗರ್ಸ್ ತಂಡದ ಅಭಿನವ್‌ ಮನೋಹರ್ ಹಾಗೂ ಕೆ.ಎಲ್. ಶ್ರೀಜಿತ್‌ ಜೋಡಿ  – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.   

ಮೈಸೂರು: ಕೆ.ಎಲ್. ಶ್ರೀಜಿತ್‌ (66 ರನ್‌, 40 ಎ, 4X2, 6X6) ಹಾಗೂ ಅಭಿನವ್ ಮನೋಹರ್ (63 ರನ್‌, 35 ಎ, 4X5, 6X3) ಜೊತೆಯಾಟದ ಅಬ್ಬರದ ಮುಂದೆ ತತ್ತರಿಸಿದ ಶಿವಮೊಗ್ಗ ಲಯನ್ಸ್ ‘ಮಹಾರಾಜ ಟ್ರೋಫಿ’ ಟೂರ್ನಿಯಿಂದ ನಿರ್ಗಮಿಸಿತು.  ಹುಬ್ಬಳ್ಳಿ ಟೈಗರ್ಸ್‌ 105 ರನ್‌ಗಳ ಭಾರಿ ಅಂತರದಿಂದ ಜಯಿಸಿತು. 

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಮಹಾರಾಜ ಟ್ರೋಫಿ’ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ಲೀಗ್‌ ಹಂತದ ಕೊನೆಯ ಪಂದ್ಯವಾಡಿದ ಟೈಗರ್ಸ್‌ ತಂಡದ ಶ್ರೀಜಿತ್‌–ಅಭಿನವ್‌ ಜೋಡಿಯು ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ  62 ಎಸೆತಗಳಲ್ಲಿ 124 ರನ್‌ ಸೇರಿಸಿದರು. ಇದರಿಂದಾಗಿ ತಂಡವು  195 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಗುರಿ ಬೆನ್ನತ್ತಿದ ಶಿವಮೊಗ್ಗ 90 ರನ್‌ಗಳಿಗೆ ಕುಸಿಯಿತು.

ಮೊದಲು ಬ್ಯಾಟ್ ಮಾಡಿದ ಟೈಗರ್ಸ್‌ಗೆ ದೇವದತ್ತ ಪಡಿಕ್ಕಲ್‌ (33 ರನ್‌, 15 ಎ, 4X5, 6X1) ಬಿರುಸಿನ ಆರಂಭ ಒದಗಿಸಿದರು. ಆದರೆ ನಾಯಕ ಮೊಹಮ್ಮದ್‌ ತಾಹಾ (8), ಕೆ.ಪಿ. ಕಾರ್ತಿಕೇಯ (12) ಉತ್ತಮ ಆಟವಾಡಲಿಲ್ಲ. ನಂತರದಲ್ಲಿ ಶ್ರೀಜಿತ್‌ಗೆ ಜೊತೆಯಾದ ಅಭಿನವ್‌ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು. ಶ್ರೀಜಿತ್‌ ಭರ್ಜರಿ ಸಿಕ್ಸರ್‌ಗಳ ಮೂಲಕ ಎದುರಾಳಿಗಳ ಬೆವರಿಳಿಸಿದರೆ, ಅಭಿನವ್‌ ಕಡೆಯಲ್ಲಿ ಬಿರುಸಾಗಿ ಬ್ಯಾಟ್ ಬೀಸಿದರು. ಕಡೆಯ ನಾಲ್ಕು ಓವರ್‌ಗಳಲ್ಲಿ ಈ ಜೋಡಿಯು 63 ರನ್‌ ಪೇರಿಸಿತು.

ADVERTISEMENT

ಬೃಹತ್‌ ಮೊತ್ತ ಬೆನ್ನತ್ತಿದ ಶಿವಮೊಗ್ಗ, ಹುಬ್ಬಳ್ಳಿಯ ಸ್ಪಿನ್ನರ್‌ಗಳ ಕೈಚಳಕಕ್ಕೆ ತಲೆಬಾಗಿತು. ಧ್ರುವ್ ಪ್ರಭಾಕರ್ (29) ಹಾಗೂ ಅನೀಶ್ವರ್‌ ಗೌತಮ್‌ (14) ಹೊರತುಪಡಿಸಿ ಉಳಿದ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸಿದರು. ಹುಬ್ಬಳ್ಳಿ ತಂಡದ ಪಡಿಕ್ಕಲ್‌ ಬದಲಿಗೆ ಇಂಪ್ಯಾಕ್ಟ್‌ ಆಟಗಾರನಾಗಿ ಬಂದ ಸ್ಪಿನ್ನರ್ ಯಶ್‌ರಾಜ್‌ ಪೂಂಜ 3 ವಿಕೆಟ್‌ ಗಳಿಸಿದರು. ಮತ್ತಿಬ್ಬರು ಸ್ಪಿನ್ನರ್‌ಗಳಾದ ಕೆ.ಸಿ. ಕಾರಿಯಪ್ಪ ಹಾಗೂ ಶ್ರೀಶಾ ಆಚಾರ್‌ ತಲಾ 2 ವಿಕೆಟ್‌ ಮೂಲಕ ಸಾಥ್ ನೀಡಿದರು.

ಶಿವಮೊಗ್ಗ ತಂಡವು ಟೂರ್ನಿಯಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದು,  ಕೇವಲ 1 ಗೆಲುವು ಹಾಗೂ 8 ಸೋಲುಗಳೊಂದಿಗೆ ಹೊರಬಿದ್ದಿತು. ಹುಬ್ಬಳ್ಳಿ ಟೈಗರ್ಸ್‌ 7 ಗೆಲುವು ಹಾಗೂ 3 ಸೋಲು ಮೂಲಕ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮುಂದಿದೆ.

ಮಂಗಳವಾರ ಕ್ವಾಲಿಫೈಯರ್‌ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು, ಕ್ವಾಲಿಫೈಯರ್‌ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ಸ್ಥಾನ ಖಚಿತಪಡಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್: ಹುಬ್ಬಳ್ಳಿ ಟೈಗರ್ಸ್‌: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 195 (ಕೆ.ಎಲ್. ಶ್ರೀಜಿತ್‌ ಔಟಾಗದೇ 66, ಅಭಿನವ್‌ ಮನೋಹರ್ ಔಟಾಗದೇ 63, ಮರಿಬಸವಗೌಡ 31ಕ್ಕೆ 2)
ಶಿವಮೊಗ್ಗ ಲಯನ್ಸ್‌: 15.5 ಓವರ್‌ಗಳಲ್ಲಿ 90 (ಧ್ರುವ್ ಪ್ರಭಾಕರ್ 29, ಅನೀಶ್ವರ್‌ ಗೌತಮ್‌ 14, ಯಶ್‌ರಾಜ್‌ ಪೂಂಜ 18ಕ್ಕೆ 3, ಕೆ.ಸಿ. ಕಾರಿಯಪ್ಪ 9ಕ್ಕೆ 2, ಶ್ರೀಶಾ ಆಚಾರ್‌ 20ಕ್ಕೆ 2)
ಪಂದ್ಯದ ಆಟಗಾರ: ಕೆ.ಎಲ್. ಶ್ರೀಜಿತ್‌

ಹುಬ್ಬಳ್ಳಿ ಟೈಗರ್ಸ್ ಪರ 3 ವಿಕೆಟ್‌ ಪಡೆದ ಯಶ್‌ರಾಜ್‌ ಪೂಂಜ ಬೌಲಿಂಗ್‌ ಶೈಲಿ – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.