ರಾಜ್ಕೋಟ್: ಭಾರತದ ಅಂಪೈರ್ ನಿತಿನ್ ಮೆನನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಂಪೈರ್ಸ್ ಎಲೀಟ್ ಪ್ಯಾನೆಲ್ನಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
‘ಐಸಿಸಿಯು ಈಚೆಗೆ ಮೆನನ್ ಅವರಿಗೆ ಒಂದು ವರ್ಷದ ಸೇವಾವಧಿಯನ್ನು ವಿಸ್ತರಿಸಿದೆ. ಭಾರತದಲ್ಲಿ ಅವರು ಈಗ ಅಗ್ರಮಾನ್ಯ ಅಂಪೈರ್ ಆಗಿದ್ದಾರೆ. ಇದೇ ತಿಂಗಳು ಅವರು ತಟಸ್ಥ ಅಂಪೈರ್ ಆಗಿ ಟೆಸ್ಟ್ಗೆ ಪದಾರ್ಪಣೆ ಮಾಡಲಿದ್ದಾರೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳೀ (ಬಿಸಿಸಿಐ) ಮೂಲಗಳು ತಿಳಿಸಿವೆ.
2020ರಲ್ಲಿ ಮೆನನ್ ಅವರನ್ನು ಎಲೀಟ್ ಪ್ಯಾನೆಲ್ಗೆ ಬಡ್ತಿ ನೀಡಲಾಗಿತ್ತು. ಎಸ್. ವೆಂಕಟರಾಘವನ್ ಮತ್ತು ಎಸ್. ರವಿ ಅವರ ನಂತರ ಸ್ಥಾನ ಪಡೆದ ಹೆಗ್ಗಳಿಕೆ ಮೆನನ್ ಅವರದ್ದು. ಆದರೆ ಕೋವಿಡ್ ಕಾರಣದಿಂದ ಕ್ರಿಕೆಟ್ ಚಟುವಟಿಕೆಗಳು ಅಸ್ತವ್ಯಸ್ತವಾಗಿದ್ದವು. ತಟಸ್ಥ ಅಂಪೈರ್ ಗಳಿಗೆ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಅವರ ಪದಾರ್ಪಣೆ ಮುಂದೆ ಹೋಯಿತು.
ಇದೇ 29ರಂದು ಗಾಲ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ–ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಅವರು ಪದಾರ್ಪಣೆ ಮಾಡಲಿದ್ದಾರೆ.
ಐಸಿಸಿಯು 11 ಅಂಪೈರ್ಗಳ ಪ್ಯಾನೆಲ್ ಪ್ರಕಟಿಸಿದೆ. ಅದರಲ್ಲಿ ಮೆನನ್ ಅಲ್ಲದೇ, ಪಾಕಿಸ್ತಾನದ ಅಲೀಂ ದಾರ್, ನ್ಯೂಜಿಲೆಂಡ್ನ ಕ್ರಿಸ್ ಗಫಾನಿ, ಶ್ರೀಲಂಕಾದ ಕುಮಾರ ಧರ್ಮಸೇನ, ದಕ್ಷಿಣ ಆಫ್ರಿಕಾದ ಮರಾಯಸ್ ಎರ್ಸ್ಮಸ್, ಇಂಗ್ಲೆಂಡ್ನ ಮೈಕೆಲ್ ಗಾಫ್, ರಿಚರ್ಡ್ ಇಲಿಂಗ್ವರ್ಥ್ ಮತ್ತು ರಿಚರ್ಡ್ ಕೆಟಲ್ಬರೊ, ಆಸ್ಟ್ರೇಲಿಯಾದ ಪಾಲ್ ರೀಫೆಲ್, ರಾಡ್ ಟಕರ್, ವೆಸ್ಟ್ ಇಂಡೀಸ್ನ ಜೋಯೆಲ್ ವಿಲ್ಸನ್ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.