ಮುಂಬೈ: ಈ ಹಿಂದೆ ಎರಡು ಬಾರಿ ‘ಅಂತಿಮ ಹಂತ’ದಲ್ಲಿ ಕೈತಪ್ಪಿದ ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಈ ಬಾರಿ ಗೆದ್ದೇಗೆಲ್ಲುವ ದೃಢನಿರ್ಧಾರವನ್ನು ತಂಡದ ಭಾರತ ತಂಡ ಹೊಂದಿದೆ ಎಂದು ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಸೋಮವಾರ ತಿಳಿಸಿದರು.
ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಸೆಪ್ಟೆಂಬರ್ 30ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಜಂಟಿ ಆತಿಥ್ಯ ಹೊಂದಿರುವ ಭಾರತ ತಂಡವು ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
ಭಾರತ ವನಿತೆಯರು ಎರಡು ಬಾರಿ ವಿಶ್ವಕಪ್ ಫೈನಲ್ನಲ್ಲಿ ಸೋಲನುಭವಿಸಿದ್ದಾರೆ. ಕೊನೆಯ ಬಾರಿ– 2017ರಲ್ಲಿ ಆಸ್ಟ್ರೇಲಿಯಾ ಎದುರು 9 ರನ್ಗಳಿಂದ ಸೋಲನುಭವಿಸಿತ್ತು. ಆ ಬಾರಿ ಲಾರ್ಡ್ಸ್ನಲ್ಲಿ ಹರ್ಮನ್ಪ್ರೀತ್ ಅವರ ವೀರೋಚಿತ 51 ರನ್ಗಳ ಆಟ ಫಲ ನೀಡಲಿಲ್ಲ. ಈ ಬಾರಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
‘ತವರಿನ ಪ್ರೇಕ್ಷಕರೆದುರು ಆಡುವುದು ಎಂದೆಂದೂ ವಿಶೇಷ ಅನುಭವ. ಈ ಬಾರಿ ನೂರಕ್ಕೆ ನೂರರಷ್ಟು ಉತ್ತಮ ಆಟ ನೀಡುತ್ತೇವೆ. ಕೊನೆಗೂ ಭಾರತೀಯರೆಲ್ಲರೂ ಕಾಯುತ್ತಿರುವ ಆ ಪ್ರಶಸ್ತಿ ಗೆಲ್ಲುವೆವೆಂಬ ವಿಶ್ವಾಸವಿದೆ’ ಎಂದು ಕೌರ್ ಅವರು ಮಹಿಳಾ ವಿಶ್ವಕಪ್ ಅನಾವರಣ ಸಂದರ್ಭದಲ್ಲಿ ತಿಳಿಸಿದರು
ಕೌರ್ ನಾಯಕತ್ವದ ತಂಡ ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ 3–2 ರಿಂದ ಟಿ20 ಸರಣಿಯನ್ನು ಮತ್ತು 2–1 ರಿಂದ ಏಕದಿನ ಪಂದ್ಯಗಳ ಸರಣಿ ಗೆದ್ದುಕೊಂಡು ಉತ್ಸಾಹದಲ್ಲಿದೆ.
‘ನಮ್ಮ ಆತ್ಮವಿಶ್ವಾಸದ ಮಟ್ಟ ಉತ್ತಮವಾಗಿದೆ. ಕೆಲವು ವರ್ಷಗಳಿಂದ ಆಡಿರುವ ರೀತಿ ನಮಗೆ ಸಾಕಷ್ಟು ವಿಶ್ವಾಸ ನೀಡಿದೆ’ ಎಂದು ಮಧ್ಯಮ ಕ್ರಮಾಂಕದ ಆಟಗಾರ್ತಿ ಭರವಸೆಯ ಮಾತುಗಳನ್ನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ತಂಡದ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ಅಭಿಪ್ರಾಯಪಟ್ಟರು.
ಪಾಕಿಸ್ತಾನವು ತನ್ನ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಬಹುರಾಷ್ಟ್ರಗಳ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ತಂಡಗಳು ತಟಸ್ಥ ತಾಣದಲ್ಲಿ ಆಡುವ ಕುರಿತಂತೆ ಆದ ಒಪ್ಪಂದದ ಅನುಸಾರ ಈ ಏರ್ಪಾಡು ಮಾಡಲಾಗಿದೆ.
ಫೈನಲ್ ಪಂದ್ಯ ನವೆಂಬರ್ 2ರಂದು ಬೆಂಗಳೂರು ಅಥವಾ (ಪಾಕಿಸ್ತಾನ ತಂಡ ಫೈನಲ್ಗೇರಿದಲ್ಲಿ) ಕೊಲಂಬೊದಲ್ಲಿ ನಡೆಯಲಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ, ಭಾರತ ತಂಡದ ದಿಗ್ಗಜ ಆಲ್ರೌಂಡರ್ ಯುವರಾಜ್ ಸಿಂಗ್, ಮಹಿಳಾ ತಂಡದ ಮಾಜಿ ತಾರೆ ಮಿಥಾಲಿ ರಾಜ್ ಈ ವೇಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.