ಅರ್ಷದೀಪ್ ಮತ್ತು ನಿತೀಶ್ ಕುಮಾರ್ ರೆಡ್ಡಿ
ಪಿಟಿಐ ಚಿತ್ರ
ಮ್ಯಾಂಚೆಸ್ಟರ್: ಎಡ ಮೊಣಕಾಲಿನ ನೋವಿನಿಂದಾಗಿ ಭಾರತದ ತಂಡದ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಸಹ ಗಾಯಾಳಾಗಿದ್ದು ನಾಲ್ಕನೇ ಟೆಸ್ಟ್ ಆಯ್ಕೆಗೆ ಲಭ್ಯರಿಲ್ಲ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.
ನಿತೀಶ್ ಕುಮಾರ್ ಎರಡು ಮತ್ತು ಮೂರನೇ ಟೆಸ್ಟ್ನಲ್ಲಿ ಆಡಿದ್ದರು. ಭಾನುವಾರ ಜಿಮ್ನಲ್ಲಿ ಅಭ್ಯಾಸದ ವೇಳೆ ಅವರಿಗೆ ಈ ನೋವು ಕಾಣಿಸಿದೆ. ಸ್ಕ್ಯಾನ್ ನಂತರ ಅಸ್ಥಿರಜ್ಜುವಿಗೆ ಹಾನಿಯಾಗಿರುವುದು ಪತ್ತೆಯಾಗಿದೆ. ‘ಅವರು ತವರಿಗೆ ಮರಳಲಿದ್ದಾರೆ’ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಹೋದ ವಾರ ಬೆಕೆನ್ಹ್ಯಾಮ್ನಲ್ಲಿ ನೆಟ್ಸ್ನಲ್ಲಿ ಬೌಲಿಂಗ್ ಮಾಡುವಾಗ ಅರ್ಷದೀಪ್ ಅವರ ಎಡಗೈ ಹೆಬ್ಬೆರಳಿಗೆ ನೋವು ಕಾಣಿಸಿಕೊಂಡಿದೆ. ಅವರು ಪ್ರವಾಸದಲ್ಲಿ ಇದುವರೆಗೆ ಒಂದೂ ಟೆಸ್ಟ್ ಆಡಿಲ್ಲ. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆಯ ಮೇಲೆ ನಿಗಾ ಇಟ್ಟಿದೆ.
ಹರಿಯಾಣದ ವೇಗಿ ಅನ್ಷುಲ್ ಕಂಬೋಜ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ನಾಲ್ಕನೇ ಟೆಸ್ಟ್ ಬುಧವಾರ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್ ತಂಡವು, ಆ್ಯಂಡರ್ಸ್– ತೆಂಡೂಲ್ಕರ್ ಟ್ರೋಫಿ ಸರಣಿಯಲ್ಲಿ 2–1 ಮುನ್ನಡೆ ಪಡೆದಿದೆ.
ನಾಲ್ಕನೇ ಟೆಸ್ಟ್ಗೆ ಭಾರತ ತಂಡ:
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ– ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜ, ಧ್ರುವ್ ಜುರೇಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅನ್ಷುಲ್ ಕಂಬೋಜ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.