ಸಿಡ್ನಿ: ಬಾರ್ಡರ್–ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ.
ಕರ್ನಾಟಕದಕೆ.ಎಲ್. ರಾಹುಲ್ ಮತ್ತುಮಯಂಕ್ ಅಗರವಾಲ್ ಆರಂಭಿಕರಾಗಿ ಕ್ರೀಸಿಗಿಳಿದರು. ಟೆಸ್ಟ್ ಕ್ರಿಕೆಟ್ನಲ್ಲಿ ಕರ್ನಾಟಕದ ಇಬ್ಬರು ಆಟಗಾರರುಭಾರತ ತಂಡದ ಪರ ಆರಂಭಿಕರಾಗಿ ಕ್ರೀಸಿಗಿಳಿದಿರುವುದು ಇದೇ ಮೊದಲಾಗಿದೆ. ಆದರೆ ಇದರ ಪ್ರಯೋಜನ ಹೆಚ್ಚು ಹೊತ್ತು ಉಳಿಯಲಿಲ್ಲ. ರಾಹುಲ್ ಅವರು ಕೇವಲ 6 ರನ್ ಗಳಿಸಿದ್ದಾಗ ಔಟ್ ಆಗಿ ಪೆವಿಲಿಯನ್ ಸೇರಿದರು. ಇದರಿಂದ ಭಾರತ ತಂಡವು ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಕ್ರೀಸಿಗಿಳಿದ ಚೇತೇಶ್ವರ ಪೂಜಾರ ಅಗರವಾಲ್ ಜತೆ ಸೇರಿ ತಂಡಕ್ಕೆ ಆಸರೆಯಾದರು. ಇವರಿಬ್ಬರ ಜತೆಯಾಟದ ಪರಿಣಾಮ ಭಾರತ ತಂಡವು ಮೊದಲ ದಿನದ ಮೊದಲ ಅವಧಿಯಲ್ಲಿ 24 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ.
ಸದ್ಯ ಅಗರವಾಲ್ 42 ಮತ್ತು ಪೂಜಾರ 16 ರನ್ ಗಳಿಸಿ ಆಟ ಮುಂದುವರಿಸಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಗುರು, ಬಾಲ್ಯದ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ನಿಧನದ ಹಿನ್ನೆಲೆಯಲ್ಲಿ ಸಂತಾಪ ಸೂಚಕವಾಗಿ ಭಾರತ ತಂಡದ ಆಟಗಾರರು ಕಪ್ಪು ಪಟ್ಟಿ ಧಿರಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ:ದಿಗ್ಗಜರ ಬೆಳೆಸಿದ ಕೋಚ್
ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು 2–1ರಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಅಥವಾ ಡ್ರಾ ಮಾಡಿಕೊಂಡರೆ, ಮೊದಲ ಬಾರಿಗೆ ಕಾಂಗರೂ ನೆಲದಲ್ಲಿ ಸರಣಿ ಜಯದ ಇತಿಹಾಸ ರಚನೆಯಾಗಲಿದೆ. ಈ ಸಾಧನೆ ಮಾಡಿದ ಭಾರತ ತಂಡದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ. ಆದರೆ ಪಂದ್ಯ ಸೋತರೆ ಸರಣಿ ಡ್ರಾ ಆಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.