ಬೆಳಗಾವಿ: ಶ್ರೀಲಂಕಾ ‘ಎ’ ತಂಡದ ಜೊತೆ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯನ್ನು ತನ್ನದಾಗಿಸಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ‘ಎ’ ತಂಡ, 5 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿ ಎದುರಿಸಲು ಸಜ್ಜಾಗಿದೆ. ಮೊದಲ ಪಂದ್ಯವು ಬೆಳಗಾವಿಯ ಆಟೊನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಇದೇ 6 ರಂದು ನಡೆಯಲಿದೆ. ಎರಡನೇ ಪಂದ್ಯವು 8ರಂದು ಹಾಗೂ ಮೂರನೇ ಪಂದ್ಯವು 10ರಂದು ನಡೆಯಲಿದೆ.
ಇತ್ತೀಚೆಗಷ್ಟೇ ಇದೇ ಮೈದಾನದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ‘ಎ’ ತಂಡವನ್ನು ಭಾರತ ‘ಎ’ ತಂಡವು ಮಣಿಸಿತ್ತು. ಅದೇ ವಿಶ್ವಾಸದೊಂದಿಗೆ ಈಗ ಏಕದಿನ ಪಂದ್ಯ ಆಡಲು ಇಳಿಯಲಿದೆ. ಭಾರತ ‘ಎ’ ತಂಡವನ್ನು ನಾಯಕ ಈಶಾನ್ ಕಿಶನ್ (ವಿಕೆಟ್ ಕೀಪರ್) ಮುನ್ನೆಡೆಸಲಿದ್ದಾರೆ. ಇವರಿಗೆ ಅನಮೋಲ್ ಸಿಂಗ್, ರುತುರಾಜ್ ಗಾಯಕವಾಡ್, ರಿಕಿ ಭುಯಿ, ದೀಪಕ್ ಹೂಡಾ, ಶುಬ್ಮನ್ ಗಿಲ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೆ, ತುಷಾರ ದೇಶಪಾಂಡೆ, ಸಂದೀಪ್ ವಾರಿಯರ್, ಈಶಾನ್ ಪೊರೆಲ್ ಹಾಗೂ ಪ್ರಶಾಂತ್ ಛೋಪ್ರಾ ಸಾಥ್ ನೀಡಲಿದ್ದಾರೆ.
ಶ್ರೀಲಂಕಾ ‘ಎ’ ತಂಡವನ್ನು ನಾಯಕ, ಬ್ಯಾಟ್ಸ್ಮನ್ ಅಶಾನ್ ಪ್ರಿಯಂಜನ್ ಮುನ್ನೆಡೆಸಲಿದ್ದಾರೆ. ಸಂಗೀತ ಕೂರೇ, ನಿರೋಶನ್ ಡಿಕ್ವೆಲ್, ದಾಸೂನ್ ಶಣಕ, ಶೆಹಾನ್ ಜಯಸೂರ್ಯ, ಸದೇರಾ ಸಮರವಿಕ್ರಮ, ಭಾನುಕಾ ರಾಜಪಕ್ಷ, ಚಮಿಕ ಕರುನಾರತ್ನ, ಕಮಿಂದು ಮೆಂಡೀಸ್, ಪಥುಂ ನಿಸ್ಸಂಕ, ಲಹಿರು ಕುಮಾರ, ಈಶಾನ್ ಜಯರತ್ನೆ, ಆಶಿಥಾ ಫರ್ನಾಂಡೊ, ಅಕಿಲಾ ಧನಂಜಯ, ಲಕ್ಷಣ ಸಂದಕೆನ್ ಸಾಥ್ ನೀಡಲಿದ್ದಾರೆ.
‘ಬೆಳಿಗ್ಗೆ 8.30ಕ್ಕೆ ಎರಡೂ ತಂಡಗಳ ನಾಯಕರ ಎದುರು ಟಾಸ್ ಮಾಡಲಾಗುವುದು. 9 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. ಮಧ್ಯಾಹ್ನ 12.30ರ ಸುಮಾರಿಗೆ ಮೊದಲ ಅರ್ಧ ಮುಗಿಯಲಿದೆ. ಭೋಜನ ವಿರಾಮದ ನಂತರ ದ್ವಿತೀಯಾರ್ಧದ ಪಂದ್ಯವು ಮಧ್ಯಾಹ್ನ 1.15ಕ್ಕೆ ಆರಂಭಗೊಳ್ಳಲಿದೆ. ಬಹುಶಃ ಪಂದ್ಯವು 4.45ಕ್ಕೆ ಕೊನೆಗೊಳ್ಳಬಹುದು. 50 ಓವರ್ಗಳ ಪಂದ್ಯ ಇದಾಗಿದೆ’ ಎಂದು ಕೆಎಸ್ಸಿಎ ಧಾರವಾಡ ವಲಯದ ಸದಸ್ಯ ಅವಿನಾಶ ಪೋತದಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹುಬ್ಬಳ್ಳಿಯಲ್ಲಿ ಇದೇ ತಿಂಗಳ 13 ಹಾಗೂ 15ರಂದು ಅನುಕ್ರಮವಾಗಿ 4ನೇ ಮತ್ತು 5ನೇ ಏಕದಿನ ಕ್ರಿಕೆಟ್ ಪಂದ್ಯಗಳು ನಡೆಯಲಿವೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.